ಹಳೇಬೀಡು: `ರಾಜ್ಯದಲ್ಲಿ 173 ಏತ ನೀರಾವರಿ ಯೋಜನೆಗಳು ಈಗಾಗಲೇ ನಿಷ್ಕ್ರಿಯವಾಗಿರುವುದರಿಂದ ಯಗಚಿ ಜಲಾಶಯದ ಮಾದಿಹಳ್ಳಿ-ಹಳೇಬೀಡು ಹೋಬಳಿಯ ಯಗಚಿ ಏತ ನೀರಾವರಿ ಯೋಜನೆ ಯಶಸ್ವಿಯಾಗುವ ಸಾಧ್ಯತೆ ಇಲ್ಲ' ಎಂದು ರೈತ ಮುಖಂಡ ಅಂದಾಲೆ ಪರಮೇಶ್ ನುಡಿದರು.
ಹಳೇಬೀಡಿನ ದ್ವಾರಸಮುದ್ರ ಕರೆಗೆ ನೀರು ಹರಿಸಲು ಹೊಯ್ಸಳರ ಕಾಲದಲ್ಲಿ ಯಗಚಿ ನದಿಗೆ ನಿರ್ಮಿಸಿದ್ದ ರಣಘಟ್ಟ ಒಡ್ಡಿನ ಬಳಿಗೆ ಹಳೇಬೀಡು ಹೋಬಳಿ ರೈತಸಂಘದ ಸದಸ್ಯರು ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.
`ಪ್ರವಾಹ ಪರಿಸ್ಥಿತಿಯಿಂದ ಒಡೆದು ಹಾಳಾದ ರಣಘಟ್ಟ ಒಡ್ಡನ್ನು ನವೀಕರಿಸುವ ಕೆಲಸ ಆಗಿಲ್ಲ. ಹೀಗಾಗಿ ಹಳೆಬೀಡು ಮಾದಿಹಳ್ಳಿ ಹೋಬಳಿ ಜನತೆ ನೂರಾರು ವರ್ಷಗಳಿಂದ ನೀರಾವರಿ ಯೋಜನೆಯಿಂದ ವಂಚಿತರಾಗಿದ್ದಾರೆ.
ಈಗ ಏತ ನೀರಾವರಿ ಹೋಜನೆಗೆ ಹಲವು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಸಿಬ್ಬಂದಿ ಹಾಗೂ ವಿದ್ಯುತ್ಬಿಲ್ ಸೇರಿದಂತೆ ನಿರ್ವಹಣಾ ವೆಚ್ಚ ದುಬಾರಿಯಾಗಲಿದೆ. ಆದ್ದರಿಂದ ರಾಜಗಾಲುವೆಯಲ್ಲಿ ನೀರು ಹರಿಸಲು ಹೆಚ್ಚಿನ ಹಣ ವ್ಯಯವಾಗುವುದಿಲ್ಲ ಎಂದು ತಿಳಿಸಿದರು.
ರಣಘಟ್ಟ ಒಡ್ಡು ಹಾಗೂ ಯಗಚಿ ನದಿ ರಾಜಗಾಲುವೆ ನಕಾಶೆಯೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಶಾಶ್ವತ ನೀರಾವರಿ ಯೋಜನೆಗೆ ಮನವಿ ಮಾಡಲಾಗುವುದು ಎಂದು ರೈತಸಂಘ ಸದಸ್ಯರು ತಿಳಿಸಿದರು.
ಯಗಚಿ ಹೋರಾಟ ಸಮಿತಿ ಅಧ್ಯಕ್ಷ ಗುರುಸ್ವಾಮಿಗೌಡ, ರೈತಸಂಘ ತಾಲ್ಲೂಕು ಘಟಕದ ಉಪಾಧ್ಯಕ್ಷ ಎಲ್.ಈ.ಶಿವಪ್ಪ, ಹೋಬಳಿ ಅಧ್ಯಕ್ಷ ಚನ್ನೇಗೌಡ, ಗೌರವಾಧ್ಯಕ್ಷ ಗಡಿ ಮಲ್ಲಿಕಾರ್ಜುನ, ಸಂಚಾಲಕ ಕೆ.ಪಿ.ಕುಮಾರ್, ಮುಖಂಡರಾದ ಎಚ್.ಎಸ್.ಕಾಂತರಾಜು, ದ್ಯಾವಪ್ಪನಹಳ್ಳಿ ಪುಟ್ಟರಾಜು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.