ಹಳೇಬೀಡು: ಜಿ.ಸಾಣೇನಹಳ್ಳಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಿರುವ ಒವರ್ಹೆಡ್ ಟ್ಯಾಂಕಿನ ಕಂಬಗಳ ಕಾಂಕ್ರೀಟ್ ಪದರ ಬಿದ್ದು ಹೋಗುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಕಂಬಗಳಿಗೆ ಅಳವಡಿಸಿರುವ ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿವೆ. ಕಂಬಗಳು ಮಾತ್ರವಲ್ಲದೆ ಅಡ್ಡತೊಲೆಗಳಲ್ಲಿಯೂ ಕಬ್ಬಿಣ ಕಾಣವಂತೆ ಸಿಮೆಂಟ್ ಉದುರಿದೆ. ಟ್ಯಾಂಕ್ ತೀರಾ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಯಾವ ಸಂದರ್ಭದಲ್ಲಾದರೂ ಮುರಿದು ಬೀಳುವ ಸ್ಥಿತಿಯಲ್ಲಿದೆ. ಸುಮಾರು 35 ವರ್ಷಗಳಿಗೂ ಹಳೆಯ ಟ್ಯಾಂಕಿನ ಅವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಟ್ಯಾಂಕ್ ಪಕ್ಕದ ನಿವಾಸಿ ಎಸ್.ಟಿ.ರಂಗಯ್ಯ ಅಳಲು ತೋಡಿಕೊಂಡರು.
ನಮಗೆ ಬಡತನ ಹಾಸುಹೊಕ್ಕಾಗಿದೆ. ಹೀಗಾಗಿ ಪುಟ್ಟ ಮನೆಗಳಲ್ಲಿ ವಾಸಮಾಡುತ್ತಿದ್ದೇವೆ. ಇತ್ತ ನೀರಿನ ಟ್ಯಾಂಕಿನ ಅವ್ಯವಸ್ಥೆಯಿಂದ ನೆಮ್ಮದಿಯ ಬದುಕು ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಗಮನ ಹರಿಸಿ ಟ್ಯಾಂಕ್ ದುರಸ್ತಿ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ತಿಮ್ಮಯ್ಯ.
‘ಒವರ್ ಟ್ಯಾಂಕ್ ಶಿಥಿಲಾವಸ್ಥೆ ತಲುಪಿರುವ ಕುರಿತು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದೇವೆ. ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಶೀಘ್ರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿಗೆ ಪತ್ರ ಬರೆಸುತ್ತೇವೆ’ ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸರೋಜಮ್ಮ ಪಾಪಯ್ಯ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.