ADVERTISEMENT

ಸಂದಾಯವಾಗದ ಹಣ: ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:31 IST
Last Updated 20 ಸೆಪ್ಟೆಂಬರ್ 2013, 9:31 IST

ಬೇಲೂರು: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕಾಗಿ ಭೂಮಿ ಮಾರಾಟ ಮಾಡಿದ್ದ ಮಾಲೀಕರಿಗೆ ನ್ಯಾಯಾಲಯದ ಅದೇಶದಂತೆ 1.49 ಕೋಟಿ ರೂಪಾಯಿ ಪರಿಹಾರ ನೀಡಲು ವಿಫಲವಾದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯ ಪೀಠೋಪಕರಣಗಳನ್ನು ಗುರುವಾರ ಜಪ್ತಿ ಮಾಡಲಾಯಿತು.

ಹಾಸನ ರಸ್ತೆಯಲ್ಲಿರುವ ಎಪಿಎಂಸಿ ಪ್ರಾಂಗಣ ಇರುವ 4.15 ಎಕರೆ ಜಾಗವನ್ನು ಭೂಮಿ ಮಾಲೀಕರಾದ ಚಿಕ್ಕಯ್ಯ, ಸಿದ್ದಯ್ಯ, ಅಮೀನಾ ಬೇಗಂ ಮತ್ತು ಸಿದ್ದಯ್ಯ ಎಂಬುವವರಿಂದ 1982ರಲ್ಲಿ ವಶಪಡಿಸಿಕೊಳ್ಳಲಾಗಿತ್ತು. ‌ಆ ವೇಳೆ ಅಡಿಯೊಂದಕ್ಕೆ 17 ರೂಪಾಯಿಯಂತ ಪರಿಹಾರ ನೀಡಲಾಗಿತ್ತು. ಈ ಹಣ ಸಾಲದೆಂದು ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಇಲ್ಲಿನ ಸಿವಿಲ್‌ ಜಡ್ಜ್ ಹಿರಿಯ ಶ್ರೇಣಿ ನ್ಯಾಯಾಲಯ ನಾಲ್ಕು ಜನರಿಗೆ ಹೆಚ್ಚುವರಿಯಾಗಿ ಒಂದು ಅಡಿಗೆ 37 ರೂಪಾಯಿಯಂತೆ 1.49 ಕೋಟಿ ರೂಪಾಯಿ ಹಣವನ್ನು ನೀಡುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸೂಚಿಸಿತ್ತು.

ಆದರೆ, ಎಪಿಎಂಸಿ ನಾಲ್ವರು ಭೂ ಮಾಲೀಕರಿಗೆ ಪರಿಹಾ ರದ ಹಣ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಎಪಿಎಂಸಿ  ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು. ನ್ಯಾಯಾಲಯದ ಅಮೀನದಾರ ಲಕ್ಷ್ಮಿನಾರಾಯಣ ಜಪ್ತಿ ಆದೇಶದೊಂದಿಗೆ ಗುರುವಾರ ಆಗಮಿಸಿ ಜಪ್ತಿ ಮಾಡಲು ಮುಂದಾದರು.

ಈ ಸಂದಭರ್ದಲ್ಲಿ ಎಪಿಎಂಸಿ ಅಧ್ಯಕ್ಷ ಲಕ್ಷ್ಮಣ್‌ ಮತ್ತು ಆಡಳಿತ ಮಂಡಳಿಯ ಕೆಲ ಸದಸ್ಯರು ಜಪ್ತಿ ಮಾಡಲು ಅಡ್ಡಿ ಪಡಿಸಿದರಲ್ಲದೆ, ನಾಲ್ವರು ಭೂ ಮಾಲೀಕರು ಹಾಗೂ ಇವರ ಪರ ವಕೀಲ ಸೋಮೇಗೌಡ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.
ನ್ಯಾಯಾಲಯದ ಸಿಬ್ಬಂದಿ ಕಚೇರಿಯ ಜೀಪು, ಕಂಪೂ್ಯಟರ್‌, ಟೇಬಲ್‌ಗಳು, ಕುರ್ಚಿ, ಅಲ್ಮೇರಾ, ಟಿ.ವಿ. ಟೈಪರೈಟಿಂಗ್‌ ಯಂತ್ರ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗಲು ಮುಂದಾದರು.

ಇದರಿಂದ ವಿಚಲಿತರಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಸದಸ್ಯರು ನಾಲ್ಕು ದಿನ ಕಾಲಾವಕಾಶ ನೀಡುವಂತೆ ಕೋರಿದರಾದರು ಇದಕ್ಕೆ ಸ್ಪಂಧನೆ ಸಿಗಲಿಲ್ಲ. ಕೊನೆಗೆ ಆಡಳಿತ ಮಂಡಳಿ ಸದಸ್ಯರು ಗೇಟ್‌ ಬಾಗಿಲು ಬಂದ್‌ ಮಾಡಿ ವಾಹನ ಹೊರ ಹೋಗದಂತೆ ತಡೆದರು. ನಂತರ ನ್ಯಾಯಾಲಯದ ಆದೇಶ ಪಾಲನೆ ಮಾಡ ಬೇಕೆಂಬ ಕಾರಣ ವಾಹನ ಹೊರ ಹೋಗಲು ಅವಕಾಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.