ADVERTISEMENT

ಸರ್ಕಾರಿ ಕಟ್ಟೆ ಮುಚ್ಚಿಸಿ ಜೋಳದ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 7:50 IST
Last Updated 9 ಮಾರ್ಚ್ 2012, 7:50 IST

ಕೊಣನೂರು: ಭೂ ಪರಿವರ್ತನೆ ಮಾಡಿಕೊಳ್ಳುವ ಉದ್ದೇಶದಿಂದ ಪ್ರಭಾವಿ ವ್ಯಕ್ತಿಯೊಬ್ಬರು ಹಿಂದಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಟ್ಟೆಯನ್ನೇ ಅಕ್ರಮವಾಗಿ ಮುಚ್ಚಿಸಿರುವ ಆರೋಪ ಸಂಬಂಧ ಗುರುವಾರ ರಾಜಸ್ವ ನಿರೀಕ್ಷಕ ಸೋಮಣ್ಣ, ಗ್ರಾಮ ಲೆಕ್ಕಾಧಿಕಾರಿ ಸುನಿಲ್ ಅಂತೋಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಂಡ್ರಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಿಂದಲಹಳ್ಳಿಯ ತಾ.ಪಂ. ಮಾಜಿ ಅಧ್ಯಕ್ಷೆ ಜಾನಕಿ ಅವರ ಪತಿ ನಾರಾಯಣ ಎಂಬುವವರು ಮೂರ‌್ನಾಲ್ಕು ತಿಂಗಳ ಹಿಂದೆ ಗ್ರಾಮದ ಸರ್ವೆ ನಂ. 60ರಲ್ಲಿ 1 ಎಕರೆ 1 ಕುಂಟೆ ಸರ್ಕಾರಿ ಕಟ್ಟೆ ಮುಚ್ಚಿಸಿ ಜೊಳ ಬಿತ್ತಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು ಡಿಸೆಂಬರ್ ತಿಂಗಳಿನಲ್ಲಿ ಹಾಸನ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಕ್ರಮ ಕೈಗೊಂಡಿರಲಿಲ್ಲ. ಜಿಲ್ಲಾಧಿಕಾರಿಗೆ ದೂರು ನೀಡಿ ಮೂರು ತಿಂಗಳಾಗಿದ್ದರೂ, ಕಟ್ಟೆಯನ್ನು ಮುಚ್ಚಿರುವ ಪ್ರಕರಣ ಹಂಡ್ರಂಗಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಗಮನಕ್ಕೆ ಬಂದಿರಲಿಲ್ಲ ಎಂದು ಗ್ರಾಮ ಲೆಕ್ಕಾಧಿ ಕಾರಿ ಸುನಿಲ್ ಅಂತೋಣಿ ತಿಳಿಸಿದರು.

ಈಚೆಗೆ ಮಾಧ್ಯಮಗಳ ಮೂಲಕ ಸರ್ಕಾರಿ ಕಟ್ಟೆ ಮುಚ್ಚಿರುವ ವಿಷಯ ತಿಳಿದ ಕೊಣನೂರು ರಾಜಸ್ವ ನಿರೀಕ್ಷಕ ಸೋಮಣ್ಣ, ಗ್ರಾಮ ಲೆಕ್ಕಾಧಿಕಾರಿ ಸುನಿಲ್ ಅಂತೋಣಿ ಗುರುವಾರ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ಜತೆ ಮಾತನಾಡಿದ ನಾರಾಯಣ ಅವರ ಪತ್ನಿ ಜಾನಕಿ, `ಸರ್ಕಾರಿ ಕಟ್ಟೆಯನ್ನು ನಾವು ಮುಚ್ಚಿಸಿಲ್ಲ. ಎಚ್.ಕೊಂಗಳಲೆ ಗ್ರಾಮದ ವ್ಯಕ್ತಿಯೊಬ್ಬರು ಮುಚ್ಚಿಸಿ ದ್ದಾರೆ~ ಎಂದು ಆರೋಪಿಸಿದರು.

ಗ್ರಾಮಸ್ಥರ ಮನವಿ ಆಲಿಸಿದ ರಾಜಸ್ವ ನಿರೀಕ್ಷಕ ಸೊಮಣ್ಣ ಅವರು, ಅಕ್ರಮವಾಗಿ ಸರ್ಕಾರಿ ಕಟ್ಟೆಯನ್ನು ಮುಚ್ಚಿಸಿರುವ ಬಗ್ಗೆ ತಾಲ್ಲೂಕು ತಹಶೀ ಲ್ದಾರ್ ಅವರಿಗೆ ಶೀಘ್ರವೇ ವರದಿ ಸಲ್ಲಿಸಿ ಇನ್ನು ಮೂರ‌್ನಾಲ್ಕು ದಿನದೊಳಗೆ ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.