ADVERTISEMENT

ಹುಲಿವಾಲ: ನದಿ ಬಳಿ ಸಂಗ್ರಹಿಸಿದ್ದ ಮರಳು ವಶ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:10 IST
Last Updated 3 ಜನವರಿ 2012, 8:10 IST

ಹೊಳೆನರಸೀಪುರ: `ತಾಲ್ಲೂಕಿನ ಹೇಮಾವತಿ ನದಿ ಪಾತ್ರದ ಹುಲಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಹಾಗೂ ಸಾಗಣೆ ನಿರಾಂತಕವಾಗಿ ನಡೆದಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ~ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ದೂರಿದರು.

ಹುಲಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಸ್ಥಳಕ್ಕೆ ಅವರು ಸೋಮವಾರ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದು ತೋರಿಸಿದರು.

ಶ್ರೀನಿವಾಸ್ ಮರಳು ಸಂಗ್ರಹ ಸ್ಥಳಕ್ಕೆ ಹೊರಟ ವಿಷಯ ತಿಳಿದ ತಹಶೀಲ್ದಾರ್, ಸರ್ಕಲ್ ಇನ್‌ಸ್ಪೆಕ್ಟರ್ ಗೋಪಾಲ್ ನಾಯಕ್ ಸಬ್‌ಇನ್‌ಸ್ಪೆಪೆಕ್ಟರ್ ಶಿವ ಕುಮಾರ್, ಹಾಗೂ ವಿವೇಕಾನಂದ ತಮ್ಮ ತಂಡ ದೊಂದಿಗೆ ಸ್ಥಳಕ್ಕಾಗಮಿಸಿ ಮರಳು ಸಂಗ್ರಹದ ರಾಶಿಯನ್ನು ಕಂಡರು. ಬಿಜೆಪಿ ಮುಖಂಡರು ಮರಳು ರಾಶಿ ಎಡೆಗೆ ಹೋಗುತ್ತಿರುವ ವಿಷಯ ತಿಳಿದ ಗ್ರಾಮದ ಯುವಕರ ಗುಂಪು ಹಲವು ಬೈಕ್‌ಗಳಲ್ಲಿ ಆಗಮಿಸಿದರು. ಮರಳು ರಾಶಿ ಇರುವ ಸ್ಥಳಕ್ಕೆ ಬಂದು ಇದು ಮರಳಲ್ಲ ಗದ್ದೆಗೆ ಹಾಕಲು ಸಂಗ್ರಹಿಸಿರುವ ಮಣ್ಣು ಎಂದು ವಾದಕ್ಕಿಳಿದರು.

ಗ್ರಾಮದ ಯುವಕ ಮಂಜೇಗೌಡ, ಅಶೋಕ ಗ್ರಾಮ ಪಂಚಾಯಿತಿ ಸದಸ್ಯ ಮಂಜೇಗೌಡ ಮಾತ ನಾಡಿ, ನಮ್ಮ ಗ್ರಾಮದಲ್ಲಿ ಒಂಡು ಕೋಟಿ ವೆಚ್ಚದಲ್ಲಿ ಈಶ್ವರ ದೇವಾಲಯ ನಿರ್ಮಾಣ ಮಾಡುತ್ತಿದ್ದೇವೆ. ಈ ದೇವಾಲಯಕ್ಕೆ ನಮಗೆ ಯಾರಿಂದಲೂ ನೆರವು ದೊರೆತಿಲ್ಲ. ಗ್ರಾಮದ ನದಿ ಪಾತ್ರದ ಮರಳನ್ನು ತೆಗೆದು ದೇವಾಲಯ ನಿರ್ಮಾಣಕ್ಕೆ ಬಳಸುತ್ತಿದ್ದೇವೆ ಎಂದರು. `ನೀವು ನಿಮಗೆ ಬೇಕಾದರೆ ದೇವಾಲಯ ಸಮೀಪ ಅಗತ್ಯ ತಕ್ಕಷ್ಟು ಮರಳು ಮಾತ್ರ ಇಟ್ಟುಕೊಳ್ಳಿ. ಇಷ್ಟೊಂದು ಪ್ರಮಾಣದಲ್ಲಿ ಸಂಗ್ರಹಿಸಿದರೆ ಕಾನೂನು ಕ್ರಮ ಜರುಗಿಸುತ್ತೇವೆ~ ಎಂದು ತಹಶೀಲ್ದಾರ್ ವಿ. ಮಂಜುನಾಥ್ ಹೇಳಿ, ಮರಳು ವಶಕ್ಕೆ ಸೂಚಿಸಿದರು.

ಕೆ.ಎಂ. ಶ್ರೀನಿವಾಸ್ ಮಾತನಾಡಿ, ಇಲ್ಲಿ ಸಂಗ್ರಹಿಸಿದ ಮರಳು ಹೊರ ಊರುಗಳಿಗೆ ಸಾಗಾಣೆಯಾಗುತ್ತಿದೆ. ಈ ಅಕ್ರಮದ ಶಾಸಕರ ಸಂಬಂಧಿ ಮೂಡಲಹಿಪ್ಪೆ ಜಿಲ್ಲಾ ಪಂಚಾಯಿತಿ ಸದಸ್ಯರ ಕೈವಾಡ ಇದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.
ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಮೈಲಾರಯ್ಯ, ಮಾರಗೋಡನಹಳ್ಳಿ ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.