ADVERTISEMENT

ಹೆದ್ದಾರಿ ಕಾಮಗಾರಿ ವಿಳಂಬ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 9:15 IST
Last Updated 14 ಡಿಸೆಂಬರ್ 2013, 9:15 IST

ಬಾಣಾವರ: ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ವಿಳಂಬ­ವಾಗುತ್ತಿರುವುದನ್ನು ಖಂಡಿಸಿ ಶುಕ್ರವಾರ ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಬಾಣಾವರದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ವಿಳಂಬವಾಗಿದ್ದು, ದೂಳಿನಿಂದ ವಾತಾವರಣ ಕಲುಷಿತ­ಗೊಂಡಿದೆ. ಇದರಿಂದ ರಸ್ತೆಯ ಅಕ್ಕಪಕ್ಕದ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಪ್ರತಿಭಟನಾ­ಕಾರರು ದೂರಿದರು.

ಕಳೆದ ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಂಜೂರಾತಿ ನೀಡಲಾಗಿತ್ತು. ಕಾಮಗಾರಿ ವಿಳಂಬವಾದ್ದರಿಂದ ಕಳೆದ 6 ತಿಂಗಳ ಹಿಂದೆ ಗ್ರಾಮಸ್ಥರೆಲ್ಲ ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಕಳೆದ 6 ತಿಂಗಳ ಹಿಂದೆ ಹೊಸ ಗುತ್ತಿಗೆದಾರರಿಂದ ರಸ್ತೆ ಕಾಮಗಾರಿ ಆರಂಭವಾಯಿತು.

ಆರಂಭದಲ್ಲಿ ರಸ್ತೆ ಕೆಲಸ ಸ್ವಲ್ಪ ನಡೆದರೂ ಚರಂಡಿ ಕೆಲಸವಾಗಲಿ, ಸೇತುವೆ ಕೆಲಸಗಳಾಗಲಿ ಆಗದೇ ಕಾಮಗಾರಿ ಕುಂಟುತ್ತಾ ಸಾಗಿತು. ಆದ್ದರಿಂದ ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣ­ಗೊಳಿಸ­ಬೇಕು ಎಂದು ಆಗ್ರಹಿಸಿದ ಪ್ರತಿಭಟನಾ­ಕಾರರು ತಮ್ಮ ಮನವಿಯನ್ನು ಉಪ ತಹಶೀಲ್ದಾರ್‌ ಅವರಿಗೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ. ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ.ಆರ್‌. ಕೃಷ್ಣಮೂರ್ತಿ, ತೊಂಡಿಗನಹಳ್ಳಿ ಚಂದ್ರಣ್ಣ, ಎಂ. ಮಂಜಣ್ಣ, ಜಯರಾಂ, ಲಕ್ಷ್ಮೀಶ್‌,  ಮಲ್ಲಾಪುರದ ರವಿ, ಬೀಮಣ್ಣ, ಯೊಗೀಶ್‌, ರಮೇಶ್‌, ಶ್ಯಾನೇಗೆರೆ ರಮೇಶ್‌, ರುದ್ರಣ್ಣ, ಮಲ್ಲಾಪುರ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.