ADVERTISEMENT

ಹೊರಗಿನವರಿಗೆ ಟಿಕೆಟ್: ಅಭಿವೃದ್ಧಿ ಕುಂಠಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 6:05 IST
Last Updated 4 ಜುಲೈ 2012, 6:05 IST

ಹಾಸನ: `ಸಕಲೇಶಪುರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದರೂಅಲ್ಲಿ ಸ್ಥಳೀಯರಿಗೆ ಸ್ಪರ್ಧಿಸಲು ಅವಕಾಶ ಲಭಿಸುತ್ತಿಲ್ಲ. ಎಲ್ಲ ರಾಷ್ಟ್ರೀಯ ಪಕ್ಷಗಳೂ ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ನೀಡುವುದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಇನ್ನು ಮುಂದೆಯಾದರೂ ಸ್ಥಳೀಯರಿಗೇ ಆದ್ಯತೆ ನೀಡಬೇಕು~ ಎಂದು ಮೂಲನಿವಾಸಿ ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷ ಎಚ್.ಇ.ದೊಡ್ಡಯ್ಯ ಒತ್ತಾಯಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. `ಹೊರಗಿನಿಂದ ಬಂದವರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೆಚ್ಚು ಆಸಕ್ತಿ ಇರುವುದಿಲ್ಲ. ತಮ್ಮ ಸ್ವಾರ್ಥದ ಬಗ್ಗೆ ಮಾತ್ರ ಅವರು ಚಿಂತನೆ ಮಾಡುತ್ತಾರೆ.
 
ಸಕಲೇಶಪುರ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ 53 ಫಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಮಂಜೂರಾತಿ ಮಾಡುವಂತೆ ನಾಲ್ಕುವರ್ಷದಿಂದ ಮನವಿ ಮಾಡಿದರೂ ಶಾಸಕರು ಗಮನಹರಿಸಿಲ್ಲ. ಅಂಬೇಡ್ಕರ್ ಭವನಕ್ಕೆ ನೀಡಿದ್ದ ಹಣವನ್ನೂ ಅವರು ವಾಪಸ್ ಪಡೆದಿದ್ದಾರೆ. ತಾಲ್ಲೂಕಿನಲ್ಲಿ ಮರಳುಮಾಫಿಯಾ ಎಗ್ಗಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ಬೇಲೂರು ಕ್ಷೇತ್ರದಲ್ಲು ಇದೇ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

ಸ್ವಾಭಿಮಾನಿ ವೇದಿಕೆಯಲ್ಲಿ ಎಲ್ಲ ಪಕ್ಷದ ಕಾರ್ಯಕರ್ತರು, ದಲಿತ ಸಂಘಟನೆಗಳ ಮುಖಂಡರು ಇದ್ದಾರೆ. ಇಂಥವರಿಗೇ ಟಿಕೆಟ್ ನೀಡಬೇಕು ಎಂದು ನಾವು ಒತ್ತಾಯಿಸುತ್ತಿಲ್ಲ. ಆದರೆ ಎಲ್ಲ ಪಕ್ಷದವರೂ ಸ್ಥಳೀಯರಿಗೇ ಟಿಕೆಟ್ ನೀಡಬೇಕು ಎಂಬುದು ನಮ್ಮ ಒತ್ತಾಯ. ಈ ಬಗ್ಗೆ ರಾಷ್ಟ್ರೀಯ ಪಕ್ಷಗಳ ಮೇಲೆ ಒತ್ತಡ ಹೇರಲು ವೇದಿಕೆ ವತಿಯಿಂದ ಸಕಲೇಶ ಪುರದಲ್ಲಿ ಆ.24 ರಂದು ಜನ ಜಾಗೃತಿ ಸಮಾವೇಶ ಹಮ್ಮಿ ಕೊಳ್ಳಲಾಗಿದೆ ಎಂದು ಎಚ್.ಇ.ದೊಡ್ಡಯ್ಯ ತಿಳಿಸಿದರು.

ವೇದಿಕೆಯ ಪದಾಧಿಕಾರಿಗಳಾದ ಮಲ್ಲಪ್ಪ, ಸಗನಯ್ಯ, ಹೇಮಂತ್  ಜಿ.ಆರ್, ಸಿದ್ದಯ್ಯ, ಪುಟ್ಟಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.