ಕೊಣನೂರು: ಕಾವೇರಿ ನದಿಯ ವಹ್ನಿ ಪುಷ್ಕರಣಿಗೆ ಗುರುವಾರ 5 ಸಾವಿರ ಮಹಶೀರ್ ಮೀನು ಮರಿಗಳನ್ನು ಬಿಡಲಾಯಿತು.
ಮೀನು ಮರಿಗಳನ್ನು ಬಿಟ್ಟು ನಂತರ ಮೀನುಗಾರಿಕೆ ಇಲಾಖೆಯ ಮೈಸೂರು ವಿಭಾಗದಜಂಟಿ ನಿರ್ದೇಶಕ ಆರ್. ಗಣೇಶ್ ಮಾತನಾಡಿ ‘ಇಲ್ಲಿಯ ರಾಮೇಶ್ವರಸ್ವಾಮಿ ದೇವಸ್ಥಾನದ ಕಾವೇರಿ ನದಿಯ ವಹ್ನಿ ಪುಷ್ಕರಣಿಯ ಎರಡು ಬದಿಯ 200 ಮೀಟರ್ ನದಿಯನ್ನು ಮತ್ಸ್ಯ ಸಂರಕ್ಷಿತ ಪ್ರದೇಶ’ ಎಂದು ತಿಳಿಸಿದರು.
‘ಈ ಪ್ರದೇಶವು ವಿಶ್ವವಿಖ್ಯಾತ ಬಿಳಿಮೀನು (ಮಹಶೀರ್) ಮತ್ತಿತರ ಅಪಾಯದ ಅಂಚಿನಲ್ಲಿರುವ ಮೀನುಗಳನ್ನು ಆವಾಸಸ್ಥಾನವಾಗಿದೆ. ಈ ನೈಸರ್ಗಿಕ ಪರಿಸರ ಮತ್ತು ಮತ್ಸ್ಯ ಸಂಕುಲಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಈ ಪ್ರದೇಶದಲ್ಲಿ ಮೀನು ಹಿಡಿಯುವುದು, ಸಿಡಿಮದ್ದು ಹಾಕುವುದು, ವಿಷಕಾರಕ ವಸ್ತುಗಳನ್ನು ಬಳಸಿ ನೀರು ಕಲುಷಿತ ಗೊಳಿಸುವುದನ್ನು ನಿಷೇಧಿಸಲಾಗಿದೆ’ ಎಂದು ಹೇಳಿದರು.
‘ಈ ಕ್ಷೇತ್ರಕ್ಕೆ ಬರುವ ಭಕ್ತರು ಸಂರಕ್ಷಿತ ಮೀನುಗಳಿಗೆ ಪುರಿ, ಕಡಲೆಕಾಯಿ, ಹಿಂಡಿ ಮುಂತಾದ ಆಹಾರವನ್ನು ಹಾಕಬಹುದು. ಈ ಸ್ಥಳದಲ್ಲಿ ಪ್ಲಾಸ್ಟಿಕ್, ಗೋಣಿಚೀಲ, ಕಸಕಡ್ಡಿ, ಬಟ್ಟೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹಾಕಬಾರದು ಈ ನಿಯಮ ಉಲ್ಲಂಘನೆ ಮಾಡಿದರೆ ಶಿಕ್ಷಗೆ ಗುರಿಪಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ನಂಜುಂಡಪ್ಪ, ಹಾರಂಗಿ ಮೀನುಗಾರಿಕೆ ಇಲಾಖೆ ನಿರ್ದೇಶಕ ಸಚಿನ್, ಸಹಾಯಕ ನಿರ್ದೇಶಕ ರಾಮನಾಥಪುರ ಕೃಷ್ಣ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಖಜಾಂಚಿ ಕೇಶವಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.