ADVERTISEMENT

ಸಕಲೇಶಪುರ–ಆಲೂರು ಕ್ಷೇತ್ರದಿಂದ ಸ್ಪರ್ಧಿಸಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 9:25 IST
Last Updated 7 ಜನವರಿ 2018, 9:25 IST

ಸಕಲೇಶಪುರ: ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಸಕಲೇಶಪುರ–ಆಲೂರು–ಕಟ್ಟಾಯ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶನಿವಾರ ಒತ್ತಾಯಿಸಿದರು.

ಶಿರಾಡಿಘಾಟ್‌ ಕಾಂಕ್ರೀಟ್‌ ಕಾಮಗಾರಿ ಸಂಬಂಧ ಅಧಿಕಾರಿಗಳ ಸಭೆಗೆ ಹಾಜರಾಗುವ ಮುನ್ನ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂದರ್ಭ ಈ ಮನವಿ ಕೇಳಿಬಂದಿತು.

‘ನಮ್ಮ ಅಭ್ಯರ್ಥಿ ಎಚ್.ಸಿ.ಮಹದೇವಪ್ಪ’ ಎಂಬ ಘೋಷಣೆಯೂ ಕಾರ್ಯಕರ್ತರಿಂದ ಕೇಳಿಬಂದಿತು. ‘ಕ್ಷೇತ್ರದಿಂದ ಪಕ್ಷದ ಶಾಸಕರಿಲ್ಲದೆ ಕಾರ್ಯಕರ್ತರು ತಬ್ಬಲಿ ಆಗಿದ್ದಾರೆ. ಇಲ್ಲಿಂದಲೇ ಸ್ಪರ್ಧೆ ಮಾಡುವುದಾಗಿ ಭರವಸೆ ನೀಡಬೇಕು’ ಎಂದು ಪಟ್ಟುಹಿಡಿದರು.

ADVERTISEMENT

‘ನೀವು ಇಷ್ಟು ಪ್ರೀತಿ, ವಿಶ್ವಾಸ ತೋರಿಸುವಾಗ ಇಲ್ಲ ಎನ್ನಲಾಗದು. ಸ್ಪರ್ಧೆ ಮಾಡುತ್ತೇನೆ ಎಂದು ಭರವಸೆ ನೀಡಲೂ ಇದು ಸಕಾಲವಲ್ಲ. ಆದರೆ, ನಿಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ’ ಎಂದು ಮಹದೇವಪ್ಪ ಭರವಸೆ ನೀಡಿದರು.

ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾನುಬಾಳು ಭಾಸ್ಕರ್‌, ಆಲೂರು ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ರಂಗನಾಥ್‌, ಜಿ.ಪಂ ಮಾಜಿ ಸದಸ್ಯರಾದ ಪರ್ವತಯ್ಯ, ಡಿ.ಸಿ. ಸಣ್ಣಸ್ವಾಮಿ, ಛಲವಾದಿ ರಾಜ್ಯ ಅಧ್ಯಕ್ಷ ಕುಮಾರ್‌, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್‌.ಎಚ್‌.ಉದಯ್‌, ಎಪಿಎಂಸಿ ಅಧ್ಯಕ್ಷ ಗಗನ್‌, ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.