ADVERTISEMENT

8 ವರ್ಷದ ಬಳಿಕ ವಾಟೆಹೊಳೆ ಭರ್ತಿ

ಮುಂಜಾಗ್ರತಾ ಕ್ರಮವಾಗಿ 3 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:38 IST
Last Updated 8 ಆಗಸ್ಟ್ 2019, 13:38 IST
ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾಗಿರುವುದು
ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾಗಿರುವುದು   

ಹಾಸನ: ಜಿಲ್ಲೆಯ ಮೂರು ಜಲಾಶಯಗಳ ಪೈಕಿ ಆಲೂರು ತಾಲೂಕಿನ ವಾಟೆಹೊಳೆ ಜಲಾಶಯ ಎಂಟು ವರ್ಷದ ಬಳಿಕ ಭರ್ತಿಯಾಗಿದೆ.

ಒಟ್ಟು 1.51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1.31 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟ 1.31 ಟಿ.ಎಂಸಿ ತಲುಪಿದ್ದು, ಜಲಾಶಯ ವ್ಯಾಪ್ತಿಯ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.

ಮುಂಜಾಗ್ರತಾ ಕ್ರಮವಾಗಿ ಗುರುವಾರ 3020 ಕ್ಯುಸೆಕ್‌ ನೀರನ್ನು ಹೊರ ಬಿಡಲಾಯಿತು. 40520 ಕ್ಯುಸೆಕ್‌ ಒಳ ಹರಿವು ಇದೆ.

ADVERTISEMENT

ಅಣೆಕಟ್ಟೆ ನಿರ್ಮಾಣವಾದಾಗಿನಿಂದ ಈ ವರೆಗೆ 1991-92, 1992-93, 1994-95, 2005-06, 2007-08, 2008-09, 2009-10, 2010-11, 2011-12 ರಲ್ಲಿ ಭರ್ತಿಯಾಗಿತ್ತು.

ಕಳೆದ ವರ್ಷ ಜೋರು ಮಳೆಗೆ ಹೇಮಾವತಿ ಸೇರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದರೂ, ವಾಟೆಹೊಳೆ ಜಲಾಶಯದ ಒಡಲು ತುಂಬಿರಲಿಲ್ಲ. ಮುಂಗಾರು ವಿಳಂಬವಾದರೂ, ಆಗಸ್ಟ್ ತಿಂಗಳಲ್ಲೇ ಜಲಾಶಯ ಒಡಲು ತುಂಬಿಕೊಂಡಿದೆ.

ಕಳೆದ ತಿಂಗಳ ಹಿಂದೆ ಮಳೆಯಾಗಿದ್ದರಿಂದ ನಿತ್ಯ ಕೇವಲ 30-40 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಆದರೆ ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಒಳ ಹರಿವು 3500 ರಿಂದ 4000 ಕ್ಯುಸೆಕ್ ಗೆ ಏರಿತು.
ಮೂರು ದಿನಗಳಿಂದ ಎಡೆ ಬಿಡದೆ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿದೆ. ತಿಂಗಳಿಂದಲೂ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಬಾರಿಯೂ ಜಲಾಶಯ ಭರ್ತಿಯಾಗುವುದು ಅನುಮಾನವಾಗಿತ್ತು.

‘ಜಲಾಶಯದಿಂದ ಯಾವುದೇ ಸಮಯದಲ್ಲಿ ನದಿಗೆ ನೀರು ಬಿಡಲಾಗುವುದು. ಹೀಗಾಗಿ ನದಿ ಪಾತ್ರ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹನುಮಂತಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.