ಹಾಸನ: ಜಿಲ್ಲೆಯಲ್ಲಿ ₹ 86 ಕೋಟಿ ವೆಚ್ಚದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗೆ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸಚಿವ ಎಚ್.ಡಿ.ರೇವಣ್ಣ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಯಾವುದೇ ಗ್ರಾಮವೂ ನೀರಿನ ಬವಣೆ ಎದುರಿಸದಂತೆ ನಿಗಾವಹಿಸಿ ಕ್ರಿಯಾ ಯೋಜನೆ ಸಿದ್ದಪಡಿಸಲು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಸಾಕಷ್ಟು ನದಿಗಳು, ಹಳ್ಳಗಳು ಹರಿಯುತ್ತವೆ. ಮಲೆನಾಡಿನಲ್ಲಿ ನೀರು ಸಿಗುತ್ತಿದ್ದು, ಅವುಗಳೆಲ್ಲದರ ಸದ್ಬಳಕೆಯಾಗಬೇಕು. ಪ್ರತಿ ಹಳ್ಳಿಗಳಿಗೂ ನಲ್ಲಿ ನೀರು ಪೂರೈಕೆಯಾಗಬೇಕು. ಜಲಧಾರೆ ಯೋಜನೆಯೂ ವ್ಯಾಪಕವಾಗಿ ಅನುಷ್ಠಾನವಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆನಂದ್ ಮಾತನಾಡಿ, ಈ ಹಿಂದೆ ₹ 164 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ₹119 ಕೋಟಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸದ್ಬಳಕೆಯಾಗಿದೆ. ಉಳಿದ ₹ 35 ಕೋಟಿಯಲ್ಲಿ ವಿದ್ಯುಚ್ಚಕ್ತಿ ಬಿಲ್ಗೆ ₹16 ಕೋಟಿ ಹಾಗೂ ಮುಂದುವರೆದ ಕಾಮಗಾರಿಗೆ ₹ 7 ಕೋಟಿ ಪಾವತಿಸಬೇಕಾಗಿದ್ದು, ₹ 12 ಕೋಟಿಗೆ ಹೊಸ ಕೆಲಸಗಳು ಲಭ್ಯವಿದೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಮತ್ತು ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ, ವಿದ್ಯುತ್ ಬಿಲ್ಗೆ ಶೇಕಡಾ 50 ರಷ್ಟು ಪಾವತಿಸಿ ಉಳಿದ ಹಣವನ್ನು ಕುಡಿಯುವ ನೀರಿನ ಕಾಮಗಾರಿಗೆ ಬಳಸಬೇಕು ಇದರಿಂದ ಒಟ್ಟಾರೆ ₹ 20 ಕೋಟಿ ವೆಚ್ಚದಲ್ಲಿ ಹೊಸ ಯೋಜನೆಗೆ ಲಭ್ಯವಾಗಲಿದೆ ಎಂದು ಒತ್ತಾಯಿಸಿದರು.
ರೇವಣ್ಣ ಮಾತನಾಡಿ, ಲಭ್ಯ ಹಣಕ್ಕೆ ಪೂರಕವಾಗಿ ರೂಪಿಸಿದ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು. ಅಲ್ಲದೇ ಈ ಹಿಂದೆ ತೀವ್ರ ಬರ ಹಿನ್ನಲೆಯಲ್ಲಿ ತಮ್ಮ ಕೋರಿಕೆ ಮೇರೆಗೆ ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಸಂಚಾರಿ ₹ 35 ಕೋಟಿ ಅಂದಾಜು ವೆಚ್ಚದ ಕ್ರಿಯಾ ಯೋಜನೆ ತಯಾರಿಸಿದ್ದರು. ಅವೆಲ್ಲವೂ ಸೇರಿದಂತೆ ₹ 86 ಕೋಟಿ ವಿಸ್ತೃತ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸೂಚನೆ ನೀಡಿದರು.
ಆಲೂರು ತಾಲ್ಲೂಕಿಗೆ ಗೊರೂರು ಮತ್ತು ಯಗಚಿ ಜಲಾಶಗಳಿಂದ ನೀರು ಪೂರೈಸುವ ಯೋಜನೆ ರೂಪಿಸುವಂತೆ ಸಚಿವರು ಹೇಳಿದರು.
ಎಚ್.ಕೆ.ಕುಮಾರಸ್ವಾಮಿ ಅವರು ಕ್ಷೇತ್ರದ ನೀರಾವರಿ ಸಮಸ್ಯೆ ಹಾಗೂ ಅತಿವೃಷ್ಟಿಬಾಧಿತ ಹಿಜ್ಜನಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು ಪ್ರಸ್ತಾಪಿಸಿದರು.
ಶಿವಲಿಂಗೇಗೌಡರು ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ.ಎಲ್. ವೈಶಾಲಿ, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.