
ಹಳೇಬೀಡು: ಮತಿಘಟ್ಟ ಕೆರೆಕೋಡಿಯಿಂದ ಸಂಪರ್ಕ ಕಲ್ಪಿಸುವ ಹಳ್ಳಿಗರಿಗೆ, ಮಳೆಗಾಲ ಬಂದರೆ ನರಕಯಾತನೆ ಅನುಭವಿಸುವಂತಾಗುತ್ತದೆ. ಕೋಡಿ ಹಳ್ಳಕ್ಕೆ ಸೇತುವೆ ಇಲ್ಲದೇ ರಭಸವಾಗಿ ಕೋಡಿ ನೀರು ಹರಿದು, ಬೃಹತ್ ಗುಂಡಿ ನಿರ್ಮಾಣವಾಗಿವೆ. ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ.
ಮಳೆಗಾಲ ಸಮೃದ್ಧವಾಗಿದ್ದರಿಂದ ಕೋಡಿ ನೀರು ರಸ್ತೆಯ ಮೇಲೆ ನಿರಂತರ ಹರಿಯುತ್ತಿದೆ. ವಾಹನಗಳು ಕೋಡಿ ದಾಟುವುದು ಸುಲಭ ಸಾಧ್ಯವಾಗಿಲ್ಲ. ಸರ್ಕಸ್ ಮಾಡಿಕೊಂಡು ಕೋಡಿ ದಾಟಿದಾಕ್ಷಣ ಏರಿಯ ರಸ್ತೆಯಲ್ಲಿ ಗುಂಡಿಗಳು ಅಪಾಯಕ್ಕಾಗಿ ಬಾಯ್ತೆರೆದು ನಿಂತಿವೆ.
‘2 ಕಿ.ಮೀ. ದೂರದ ಏರಿ ದಾಟಿಕೊಂಡು ಪ್ರಯಾಣ ಮಾಡುವುದರಿಂದ ಸೊಂಟ, ಮೈ, ಕೈ ನೋವು ಕಾಣಿಸಿಕೊಳ್ಳುತ್ತದೆ. ಟ್ರ್ಯಾಕ್ಟರ್, ಲಾರಿ, ಕಾರು ಮೊದಲಾದ ವಾಹನದ ಚಕ್ರ ಗುಂಡಿಯಲ್ಲಿ ಸಿಲುಕಿದರೆ, ಮೇಲೆತ್ತುವುದು ಸುಲಭ ಸಾಧ್ಯವಾಗಿಲ್ಲ’ ಎಂಬ ಮಾತು ಟ್ರ್ಯಾಕ್ಟರ್ ಚಾಲಕ ಕಿರಣ್ ಅವರಿಂದ ಕೇಳಿ ಬಂತು.
ಕೆರೆ ಏರಿಯ ರಸ್ತೆ ಮತಿಘಟ್ಟ ಸೇರಿದಂತೆ ಹತ್ತಾರು ಹಳ್ಳಿಗರಿಗೆ ಜಾವಗಲ್, ಅರಸೀಕೆರೆಗೆ ಸಂಪರ್ಕ ಕಲ್ಪಿಸುತ್ತದೆ. ಹಳೇಬೀಡು ಜನರಿಗೂ ಅರಸೀಕೆರೆಗೆ ಹತ್ತಿರದ ರಸ್ತೆಯಾಗಿದೆ. ಈ ರಸ್ತೆ ಮೂಲಕ ಜಾವಗಲ್, ಒಚಿಹಳ್ಳಿ ಗೇಟ್ ಹಾಗೂ ಕಡೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿದರೆ, ಹಳೇಬೀಡು, ಜಾವಗಲ್ ಭಾಗದವರು ಕಡಿಮೆ ಅವಧಿಯಲ್ಲಿ ಶಿವಮೊಗ್ಗ ತಲುಪಬಹುದು ಎಂದು ಜನರು ಹೇಳಿದ್ದಾರೆ.
‘ಆದರೆ ಪ್ರಮುಖವಾದ ರಸ್ತೆಯಲ್ಲಿ ಮತಿಘಟ್ಟ ಕೆರೆಯ ಕೋಡಿಗೆ ಮೇಲ್ಸೇತುವೆ ನಿರ್ಮಿಸಲು ಯಾವ ಸರ್ಕಾರವೂ ಮನಸ್ಸು ಮಾಡಿಲ್ಲ’ ಎಂದು ಮತಿಘಟ್ಟ, ಲಿಂಗಪ್ಪನಕೊಪ್ಪಲು ಗ್ರಾಮಸ್ಥರು ದೂರಿದರು.
ಕೋಡಿ ಸಮಸ್ಯೆ ಜೊತೆಗೆ ಏರಿ ರಸ್ತೆ ಗುಂಡಿಮಯ ಆಗಿರುವುದರಿಂದ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಬಾಡಿಗೆ ವಾಹನದವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆರೆಯಿಂದ ಆಚೆಯ ಶಿವನೇನಹಳ್ಳಿ, ಅಪ್ಪಿಹಳ್ಳಿ ಭಾಗದವರು, ಹಳೇಬೀಡು, ಬೇಲೂರಿಗೆ ಬಂದು ಹೋಗಲು ಕಷ್ಟವಾಗುತ್ತಿದೆ.
ಮತಿಘಟ್ಟ ಭಾಗದ ಹಳ್ಳಿಯವರು ಜಾವಗಲ್, ಅರಸೀಕೆರೆಗೆ ಹೋಗಿ ಬರಲು ಕಷ್ಟ ಅನುಭವಿಸುವಂತಾಗಿದೆ. ಲೋಕೋಪಯೋಗಿ ಇಲಾಖೆಯವರು ಕೋಡಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಮತಿಘಟ್ಟ ಭಾಗದ ಜನರ ಒತ್ತಾಯ.
ಸರ್ಕಾರಕ್ಕೆ ಪ್ರಸ್ತಾವ
‘ಮತಿಘಟ್ಟ ಕೆರೆ ಕೋಡಿಗೆ ಮೇಲ್ಸೇತುವೆ ನಿರ್ಮಾಣ ಹಾಗೂ ಏರಿ ರಸ್ತೆ ಡಾಂಬರೀಕರಣಕ್ಕೆ ₹ 1.5 ಕೋಟಿ ವೆಚ್ಚದ ಅಂದಾಜು ಸಿದ್ದಪಡಿಸಲಾಗಿದೆ. ಕಾಮಗಾರಿಗೆ ಹಣ ಮಂಜೂರು ಮಾಡಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣೇಗೌಡ ತಿಳಿಸಿದರು. ಏರಿ ಉದ್ದಕ್ಕೂ ಬ್ಯಾರಿಕೇಡ್ ನಿರ್ಮಾಣಕ್ಕೆ ಕೈಹಾಕಲಾಗಿದ್ದು ಏರಿಯ ಬದಿಯಲ್ಲಿ ಸ್ವಚ್ಛತೆ ಮಾಡಲಾಗಿದೆ. ಮಂಜೂರಾತಿಗಾಗಿ ಕಾಯುತ್ತಿದ್ದೇವೆ ಎಂದರು.
ಜಾನುವಾರು ಮೇಯಿಸಲು ತೊಂದರೆ
ಮತಿಘಟ್ಟ ಕೋಡಿಕೊಪ್ಪಲು ಹೊಸೂರು ಮೊದಲಾದ ಗ್ರಾಮದ ಬಹುತೇಕರು ಮತಿಘಟ್ಟ ಕೆರೆ ಕೋಡಿ ದಾಟಿಕೊಂಡು ತಮ್ಮ ಜಮೀನುಗಳಿಗೆ ಹೋಗಿ ಬರಬೇಕಾಗಿದೆ. ಮಳೆಗಾಲದಲ್ಲಿ ದನ ಕರು ಆಡು ಕುರಿಗಳನ್ನು ಕೆರೆ ಕೋಡಿ ಮೂಲಕ ಮೇಯಲು ಕರೆದೊಯ್ಯಬೇಕಾಗಿದೆ. ಮಳೆ ಬಂದಾಗ ಕೋಡಿಯಲ್ಲಿ ನೀರಿನ ಹರಿವು ಹೆಚ್ಙಾದರೆ ಒಮ್ಮೊಮ್ಮೆ ದಾಟಿ ಹೋಗಲು ಅವಕಾಶ ಇಲ್ಲದಂತಾಗುತ್ತದೆ. ‘ಕೋಡಿ ನೀರು ಕೊಂಚ ಕಡಿಮೆಯಾದರೆ ಮಳೆ ನಿಲ್ಲುವವರೆಗೂ ಮೊಣಕಾಲುದ್ದ ನೀರಿನಲ್ಲಿ ಕೋಡಿ ದಾಟುವ ಪರಿಸ್ಥಿತಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಎತ್ತಿನಗಾಡಿ ದಾಟಿಸುವುದು ಕಷ್ಟವಾಗುತ್ತದೆ. ಆಡು ಕುರಿ ಕರೆದೊಯ್ಯುವುದಂತೂ ಸುಲಭ ಸಾಧ್ಯವಲ್ಲ’ ಎಂದು ನಾಗೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.