ADVERTISEMENT

ಅಧಿಕಾರಿಗಳಿಂದ ತೋಟದ ಬೇಲಿ ಧ್ವಂಸ: ಮಾಜಿ ಶಾಸಕರ ಪುತ್ರಿ ಏಕಾಂಗಿ ಧರಣಿ

ಡಿ.ಸಿ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 14:07 IST
Last Updated 18 ಡಿಸೆಂಬರ್ 2018, 14:07 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸಕಲೇಶಪುರದ ರೂಪಲತಾ ಮಂಜುನಾಥ್ ಏಕಾಂಗಿ ಧರಣಿ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸಕಲೇಶಪುರದ ರೂಪಲತಾ ಮಂಜುನಾಥ್ ಏಕಾಂಗಿ ಧರಣಿ ನಡೆಸಿದರು.   

ಹಾಸನ : ‘ಎತ್ತಿನಹೊಳೆ ಯೋಜನೆಯ ಪೈಪ್ ಲೈನ್ ಅಳವಡಿಸುವ ಸಂಬಂಧ ತೋಟದ ಬೇಲಿ ಧ್ವಂಸ ಮಾಡಿ, ಬೆಳೆ ನಾಶ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸಕಲೇಶಪುರ ನಿವಾಸಿ ರೂಪಲತಾ ಮಂಜುನಾಥ್ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಸಕಲೇಶಪುರ ತಾಲ್ಲೂಕಿನ ಹೆಬ್ಬಸಾಲೆ ಗ್ರಾಮದ ಸರ್ವೆ ನಂ. 41/2ರಲ್ಲಿರುವ ತೋಟದಲ್ಲಿ ಪೈಪ್‌ ಅಳವಡಿಕೆಗೂ ಮುನ್ನ ಅಧಿಕಾರಿಗಳಾದ ನವೀನ್‌, ಶ್ರೀಕಾಂತ್‌ ನೋಟಿಸ್‌ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ’
ಎಂದು ಆರೋಪಿಸಿದರು.

’ತೋಟದಲ್ಲಿ ಕೊಯ್ಲಿಗೆ ಬಂದಿರುವ ಕಾಫಿ, ಮೆಣಸು, ಅಡಿಕೆ ಹಾಗೂ ತೇಗ, ಸಿಲ್ವರ್, ಮಾವು, ಹಲಸು ಸೇರಿದಂತೆ ವಿವಿಧ ಜಾತಿಯ ಬೆಲೆ ಬಾಳುವ ಮರಗಳಿವೆ. ಪೈಪ್ ಲೈನ್ ಸುಮಾರು 100 ಅಡಿ ಜಾಗದಲ್ಲಿ ಹಾದು ಹೋಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಬೇಲಿ ಕಿತ್ತು ಹಾಕಿರುವುದರಿಂದ ತೋಟಕ್ಕೆ ಕಾಡು ಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಕಳ್ಳರು ಮರಗಳನ್ನು ಕದ್ದು ಸಾಗಿಸುತ್ತಿದ್ದಾರೆ. ಪತಿ ತೀವ್ರ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಏಕಾಂಗಿ ಹೋರಾಟ ಮಾಡುತ್ತಿದ್ದೇನೆ’ ಎಂದು ಅಲವತ್ತುಕೊಂಡರು.

‘ತೋಟದಲ್ಲಿ ಪೈಪ್ ಲೈನ್ ಹಾದು ಹೋಗಿರುವುದಕ್ಕೆ ಪರಿಹಾರ ನೀಡಲಾಗಿದೆ. ಆದರೆ, ಕಾಮಗಾರಿ ಆರಂಭಿಸುವ ಮುನ್ನ ಯಾವುದೇ ಸೂಚನೆ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತೋಟಕ್ಕೆ ಬೇಲಿ ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರೂಪಲತಾ ಮಂಜುನಾಥ್‌ ಅವರು ಸಕಲೇಶಪುರ ಕ್ಷೇತ್ರದಲ್ಲಿ 1972 ರಿಂದ 1978ರ ವರೆಗೆ ಶಾಸಕರಾಗಿದ್ದ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಕೆ.ಎಂ.ರುದ್ರಪ್ಪ ಅವರ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.