ಬೇಲೂರು: ಚಾಲಕನ ನಿಯಂತ್ರಣ ತಪ್ಪಿದ್ದ ಆಂಬುಲೆನ್ಸ್ ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ 5.30ರ ಸುಮಾರಿಗೆ ರಸ್ತೆ ಪಕ್ಕದಲ್ಲಿದ್ದ ಬೈಕ್ ಹಾಗೂ ಮನೆಗೆ ಗುದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 18 ತಿಂಗಳ ಮಗುವನ್ನು ಚಿಕಿತ್ಸೆಗೆಂದು ಚಿಕ್ಕಮಗಳೂರಿನಿಂದ ಹಾಸನಕ್ಕೆ 108 ಆಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಇಲ್ಲಿಯ ನೆಹರು ನಗರದಲ್ಲಿ ರಸ್ತೆಯಲ್ಲಿ ಚಾಲಕನಿಗೆ ಮೂರ್ಛೆರೋಗ ಬಂದಿದೆ. ಈ ಸಂಧರ್ಭ ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ವಾಹನ ರಸ್ತೆ ಪಕ್ಕದಲ್ಲಿದ್ದ ಬೈಕ್, ಮನೆಗೆ ಗುದ್ದಿ ನಿಂತಿದೆ.
ಆಂಬುಲೆನ್ಸ್ ಗುದ್ದಿದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದ್ದು, ಮನೆಯ ಮುಂಭಾಗಕ್ಕೆ ಹಾನಿಯಾಗಿದೆ. ಆದರೆ ಆಂಬುಲೆನ್ಸ್ನಲ್ಲಿದ್ದ ಚಾಲಕ ಹಾಗೂ ಮಗೂ ಮತ್ತು ಪೋಷಕರಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಗು ಮತ್ತು ಪೋಷಕರನ್ನು ಬೇರೊಂದು ಆಂಬುಲೆನ್ಸ್ನಲ್ಲಿ ಹಾಸನಕ್ಕೆ ಕಳುಹಿಸಿ ಕೊಟ್ಟರು.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.