ADVERTISEMENT

ಎಚ್‌ಡಿಸಿಸಿ ಬ್ಯಾಂಕ್: ಸೋಮನಹಳ್ಳಿ ನಾಗರಾಜ್‍ಗೆ ಮತ್ತೊಂದು ಅವಕಾಶ

ಎಚ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಅರಸೀಕೆರೆ ಬಂಡಿಗೌಡ್ರ ರಾಜಣ್ಣ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 14:46 IST
Last Updated 9 ಅಕ್ಟೋಬರ್ 2020, 14:46 IST
ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾದ ಸೋಮನಹಳ್ಳಿ ನಾಗರಾಜ್‌ ಮತ್ತು ಉಪಾಧ್ಯಕ್ಷ ಬಂಡಿಗೌಡ್ರು ರಾಜಣ್ಣ ಅವರನ್ನು ಶಾಸಕ ಸಿ.ಎನ್‌.ಬಾಲಕೃಷ್ಣ ಅಭಿನಂದಿಸಿದರು.
ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾದ ಸೋಮನಹಳ್ಳಿ ನಾಗರಾಜ್‌ ಮತ್ತು ಉಪಾಧ್ಯಕ್ಷ ಬಂಡಿಗೌಡ್ರು ರಾಜಣ್ಣ ಅವರನ್ನು ಶಾಸಕ ಸಿ.ಎನ್‌.ಬಾಲಕೃಷ್ಣ ಅಭಿನಂದಿಸಿದರು.   

ಹಾಸನ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಅರಸೀಕೆರೆ ತಾಲ್ಲೂಕಿನ ಬಂಡಿಗೌಡ್ರ ರಾಜಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದೆಯೂ ನಾಗರಾಜ್ ಅಧ್ಯಕ್ಷರಾಗಿ 10 ತಿಂಗಳು ಆಡಳಿತ ನಡೆಸಿದ್ದರು. ಹಾಗಾಗಿ ಈ ಬಾರಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಬಂಡಿಗೌಡ್ರ ರಾಜಣ್ಣ ಅವರಿಗೆ ಮೊದಲ ಬಾರಿಗೆ ಉಪಾಧ್ಯಕ್ಷರಾಗುವ ಅವಕಾಶ ಸಿಕ್ಕಿದೆ.

ಶುಕ್ರವಾರ ಬ್ಯಾಂಕ್ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಈ ಮೊದಲೇ ಆದ ಒಪ್ಪಂದಂತೆ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಜಣ್ಣ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಜಗದೀಶ್, ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬುದನ್ನು ಘೋಷಣೆ ಮಾಡಿದರು.

ADVERTISEMENT

ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಲವರಿಗೆ ನಿರಾಸೆಯಾಗಿದ್ದು, ಮುಂದಿನ ಅವಧಿಯಲ್ಲಿ ಉಳಿದವರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.ಜೆಡಿಎಸ್‌ ಕಾರ್ಯಕರ್ತರು ಬ್ಯಾಂಕ್ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ಬ್ಯಾಂಕ್‍ನ ನೂತನ ಅಧ್ಯಕ್ಷರನ್ನಾಗಿ ಸಾಮಾನ್ಯ ರೈತನ ಮಗನಾದ ಸೋಮನಹಳ್ಳಿ ನಾಗರಾಜ್ ಹಾಗೂ ಉಪಾಧ್ಯಕ್ಷರನ್ನಾಗಿ ಯಾದವ ಸಮಾಜದ ಬಂಡಿಗೌಡ್ರ ರಾಜಣ್ಣ ಆಯ್ಕೆ ಮಾಡಿದ್ದೇವೆ. ಹಿರಿಯರಾದ ಪಟೇಲ್ ಶಿವರಾಂ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಇರಾದೆ ಇತ್ತು. ಆದರೆ ಅವರಿಗೆ ಅನಾರೋಗ್ಯ ಸರಿ ಇಲ್ಲದ ಅವರನ್ನು ಕೇಂದ್ರ ಅಪೆಕ್ಸ್ ಬ್ಯಾಂಕ್ ಗೆ ಕಳಿಸಲಾಗುವುದು’ ಎಂದು ಹೇಳಿದರು.

‘ನನ್ನ ಮಗ ಡಾ.ಸೂರಜ್‍ನನ್ನು ಅಧ್ಯಕ್ಷರನ್ನಾಗಿ ಮಾಡಲಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಅವರನ್ನು ಅಧ್ಯಕ್ಷನಾಗಿಸುವ ಪ್ರಶ್ನೆಯೇ ಇಲ್ಲ’ ಎಂದು ರೇವಣ್ಣ ಸ್ಪಷ್ಟಪಡಿಸಿದರು.‘ನಾಗರಾಜು ಅವರು ಎರಡೂವರೆ ವರ್ಷ ಅಥವಾ ಐದು ವರ್ಷ ಅಧ್ಯಕ್ಷರಾಗಿ ಇರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.