ಅರಸೀಕೆರೆ: ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಸುಮಾರು 27ಕ್ಕಿಂತಲೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾದರೆ ಇನ್ನೂ ಕೆಲವು ಮನೆಗಳು ಕುಸಿದು ಬಿದ್ದಿವೆ. ಈ ಹಿನ್ನೆಲೆಯಲ್ಲಿ ಬಡವರು ವಾಸಿಸಲು ಮನೆ ಇಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ಹೊರವಲಯದ ಗೀಜಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಮನೆ ಕುಸಿದ ಪರಿಣಾಮ ಭಾನುವಾರ ಬೆಳಿಗ್ಗೆ ತಹಶೀಲ್ದಾರ್ ಸಂತೋಷ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗ್ಗೆ ಒಂದು ವಾರದಿಂದ ತಾಲ್ಲೂಕಿನಲ್ಲಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ತಾಲ್ಲೂಕಿನ ವಿವಿಧೆಡೆ ಹಳೆಯ ಮನೆಗಳು ಸೇರಿದಂತೆ ಕೆಲವು ವಾಸದ ಮನೆಗಳೂ ಕುಸಿದು ಬಿದ್ದಿವೆ, ಯಾವುದೇ ಪ್ರಾಣಾಪಾಯವಿಲ್ಲ’ ಎಂದರು.
ಶನಿವಾರ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಗಂಡಸಿ ಹೋಬಳಿಯ ಬಿಸಿಲೇಹಳ್ಳಿ, ನಗರ ಪ್ರದೇಶ, ದೊಡ್ಡೇನಹಳ್ಳಿ, ಬಸವರಾಜಪುರ, ಕಡೇಹಳ್ಳಿ, ಕಣಕಟ್ಟೆ, ಮುದ್ದುರಂಗನಹಳ್ಳಿ, ಕರಡಿಹಳ್ಳಿ, ಬಿ.ಹರಿಹರಪುರ, ನಾಗಸುಮುದ್ರ, ನಂದಿಹಳ್ಳಿ, ಗೀಜಿಹಳ್ಳಿ, ಸಿಂಗಟಗೆರೆ, ಕೊಮ್ಮರಘಟ್ಟ ತಾಂಡ್ಯ, ಮುದುಡಿ, ಕೆಂಗುಬರಹಟ್ಟಿ, ಮುದುಡಿ ಬಿ. ತಾಂಡ್ಯ, ಬಸವನಘಟ್ಟ, ಕಲ್ಲುಸಾದರಹಳ್ಳಿ, ಬೆಲವತ್ತಹಳ್ಳಿ, ಮಲ್ಲದೇವಿಹಳ್ಳಿ, ನಾರಾಯಣಘಟ್ಟೆಹಳ್ಳಿ, ದೇಶಾಣಿ ಗೊಲ್ಲರಹಟ್ಟಿ ಸೇರಿದಂತೆ ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ.
‘ಮಳೆಗೆ ಮನೆಗಳು ಹಾನಿಯಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಮಾಹಿತಿ ಪಡೆದು ಜಿಲ್ಲಾಧಿಕಾರಿ ಅವಗಾಹನೆಗೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಹಾನಿಯಾಗಿರುವ ಮನೆಗಳ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.
ಶನಿವಾರ ಸಂಜೆ ಮತ್ತು ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಕೆಲವು ಕೆರೆಗಳಿಗೆ ಅಲ್ಪಸ್ವಲ್ಪ ನೀರು ತುಂಬಿರುವುದರಿಂದ ಸ್ಥಳೀಯ ಗ್ರಾಮಸ್ಥರು ಖುಷಿಯಾದರೆ. ಇನ್ನು ಕೆಲವೆಡೆ ಕೊಯ್ಲಿಗೆ ಬಂದು ಬೆಳೆದು ನಿಂತಿರುವ ರಾಗಿ ಬೆಳೆಗೆ ಹಾನಿಯಾಗಿ, ಹೆಚ್ಚು ಮಳೆಯಿಂದಾಗಿ ಕರಗುವ ಸ್ಥಿತಿ ತಲುಪಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿ ರೈತರು ಕಂಗಾಲಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.