ADVERTISEMENT

ಕಲಾ ಗ್ಯಾಲರಿ ನಿರ್ಮಾಣ: ಭರವಸೆ

ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಅಮೋಘ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 15:17 IST
Last Updated 15 ಏಪ್ರಿಲ್ 2022, 15:17 IST
ಹಾಸನಾಂಬ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಕಲಾವಿದರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಮೋಘ ಚಿತ್ರಕಲಾ ಪ್ರದರ್ಶನವನ್ನು ಗಣ್ಯರು ವೀಕ್ಷಿಸಿದರು
ಹಾಸನಾಂಬ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಕಲಾವಿದರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಮೋಘ ಚಿತ್ರಕಲಾ ಪ್ರದರ್ಶನವನ್ನು ಗಣ್ಯರು ವೀಕ್ಷಿಸಿದರು   

ಹಾಸನ: ‘ನಗರದ ಹೊಸ ಬಸ್‌ ನಿಲ್ದಾಣದ ಪಕ್ಕದ ಜಾಗವನ್ನು ಚಿತ್ರಕಲಾ ಪರಿಷತ್‌ಗೆ ನೀಡುವ ಜತೆಗೆ, ಇದೇ ಸ್ಥಳದಲ್ಲಿ ಸುಸಜ್ಜಿತ ಕಲಾ ಗ್ಯಾಲರಿ ನಿರ್ಮಿಸಲಾಗುವುದು’ ಎಂದು ಶಾಸಕ ಪ್ರೀತಂ ಜೆ.ಗೌಡ ಭರವಸೆ ನೀಡಿದರು.

ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹೊಯ್ಸಳ ಚಿತ್ರಕಲಾ ಪರಿಷತ್‌, ಜಿಲ್ಲಾ ಚಿತ್ರಕಲಾ ಸಂಘ ಹಾಗೂ ಸಂಸ್ಕಾರ ಭಾರತಿ ಸಹಯೋಗದಲ್ಲಿ ವಿಶ್ವ ಕಲಾವಿದರ ದಿನಾಚರಣೆ ಅಂಗವಾಗಿ ಶುಕ್ರವಾರಹಮ್ಮಿಕೊಂಡಿದ್ದ ಅಮೋಘ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿಮಾತನಾಡಿದರು.

‘ಪರಿಷತ್‌ಗೆ ಜಾಗ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.ಇದನ್ನು ಸರ್ಕಾರದ ಗಮನಕ್ಕೆ ತಂದು, ಮೂರು ತಿಂಗಳಲ್ಲಿ ಗ್ಯಾಲರಿ ನಿರ್ಮಿಸಲಾಗುವುದು’ ಎಂದರು.

ADVERTISEMENT

‘ಏಕಾಗ್ರತೆಯಲ್ಲಿ ಪಕ್ವತೆ ಹೊಂದಿರುವ ವ್ಯಕ್ತಿ ಬಾಲ್ಯದಿಂದಲೇ ಪ್ರೇರಣೆಗೆಒಳಗಾಗಿ ಚಿತ್ರಕಲಾವಿದನಾಗುತ್ತಾನೆ ಎಂಬುದನ್ನು ಕೇಳಿದ್ದೇನೆ. ಒಂದು ಕಲಾಕೃತಿ ₹5 ಕೋಟಿಗೆ ಮಾರಾಟವಾಗುತ್ತದೆ ಎಂದರೆ ಕಲೆಯ ಶಕ್ತಿ ಏನೆಂಬುದು ಗೊತ್ತಾಗುತ್ತದೆ. ಪೋಷಕರು ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ‘ಉತ್ತಮವಾದ ಕಲಾಕೃತಿಗಳು ಜಿಲ್ಲೆಯಲ್ಲಿಯೇ ರಚಿಸಲ್ಪಡುತ್ತಿರುವುದು ಸಂತಸದ ಸಂಗತಿ. ಪ್ರಸ್ತುತ ಚಿತ್ರಕಲಾವಿದರು ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ. ಚಿತ್ರಕಲೆಯೂ ಮಕ್ಕಳ ಜ್ಞಾನರ್ಜನೆಗೆ ಸಹಕಾರಿಯಾಗಲಿದೆ’ ಎಂದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್ ಮಾತನಾಡಿ, ‘ಜಿಲ್ಲೆಯಲ್ಲಿರುವ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ದೊರೆತಿದೆ’ ಎಂದು ಹೇಳಿದರು.

ಪೊಲೀಸ್‌ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ವಿನೋದ್ ಕುಮಾರ್, ಚಿತ್ರಕಲಾವಿದ ಬಿ.ಎಸ್. ದೇಸಾಯಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.