ADVERTISEMENT

ಯತ್ತಹಳ್ಳಿ ಗ್ರಾಮಕ್ಕೆ ಶೀಘ್ರವೇ ಸೇತುವೆ ನಿರ್ಮಾಣ: ಭರವಸೆ

ಯತ್ತಹಳ್ಳಿ ಗ್ರಾಮಕ್ಕೆ ತಾ.ಪಂ. ಇಒ ಭೇಟಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 4:28 IST
Last Updated 28 ಜುಲೈ 2021, 4:28 IST
ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ ಗ್ರಾ.ಪಂ. ವ್ಯಾಪ್ತಿಯ ಯತ್ತಹಳ್ಳಿ ಗ್ರಾಮಕ್ಕೆ ಸೋಮವಾರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್. ಹರೀಶ್ ಭೇಟಿ ನೀಡಿ ಸೇತುವೆ ನಿರ್ಮಾಣ ಸಂಬಂಧ ಸ್ಥಳ ಪರಿಶೀಲಿಸಿದರು
ಸಕಲೇಶಪುರ ತಾಲ್ಲೂಕಿನ ಹೊಂಗಡಹಳ್ಳ ಗ್ರಾ.ಪಂ. ವ್ಯಾಪ್ತಿಯ ಯತ್ತಹಳ್ಳಿ ಗ್ರಾಮಕ್ಕೆ ಸೋಮವಾರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್. ಹರೀಶ್ ಭೇಟಿ ನೀಡಿ ಸೇತುವೆ ನಿರ್ಮಾಣ ಸಂಬಂಧ ಸ್ಥಳ ಪರಿಶೀಲಿಸಿದರು   

ಸಕಲೇಶಪುರ: ತಾಲ್ಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯತ್ತಹಳ್ಳಿ ಗ್ರಾಮಕ್ಕೆ ಸೋಮವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್‌. ಹರೀಶ್‌ ಭೇಟಿ ನೀಡಿ ಕಾಲು ಸಂಕ ಪ‍ರಿಶೀಲಿಸಿದರು.

ಸೇತುವೆ ಇಲ್ಲದೆ ಗ್ರಾಮಸ್ಥರು ಕಾಲು ಸಂಕದ ಮೂಲಕವೇ ದಾಟುವ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ ಜುಲೈ 25ರಂದು ‘ಜೀವ ಭಯದಲ್ಲಿ ಕಾಲು ಸಂಕದ ನಡಿಗೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸುಮಾರು ಎರಡು ಕಿ.ಮೀ. ಕಾಲು ನಡಿಗೆಯಲ್ಲಿ ತೆರಳಿ ಗ್ರಾಮಸ್ಥರೇ ಮರಮುಟ್ಟುಗಳಿಂದ ನಿರ್ಮಿಸಿಕೊಂಡಿರುವ ಕಾಲು ಸಂಕದ ಮೇಲೆ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

ಕಳೆದ 30 ವರ್ಷಗಳಿಂದ ಎಲ್ಲಾ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ, ಹಿಂದಿನ ಮುಖ್ಯಮಂತ್ರಿಗಳಿಗೂ ಸಹ ಗ್ರಾಮಕ್ಕೊಂದು ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದ್ದೇವೆ. ಯಾರೂ ಸಹ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಶರವೇಗದಲ್ಲಿ ಹರಿಯುವ ಹಳ್ಳ ದಾಟಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಗ್ರಾಮಸ್ಥರು ಸಮಸ್ಯೆ ವಿವರಿಸಿದರು.

ADVERTISEMENT

‘ನಾವು ಮನವಿ ಸಲ್ಲಿಸುವುದೇ ಆಗಿತ್ತು ಯಾರೂ ಸಹ ಇದುವರೆಗೂ ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. ತಾ.ಪಂ. ಇಓ ಪಶ್ಚಿಮಘಟ್ಟದ ಅಂಚಿನಲ್ಲಿರುವ ನಮ್ಮೂರಿಗೆ ಭೇಟಿ ನೀಡಿ ಸೇತುವೆ ಭರವಸೆ ನೀಡಿದ್ದಾರೆ. ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅವರೂ ಸಹ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇದರಿಂದ ಸೇತುವೆ ನಿರ್ಮಾಣ ಆಗುತ್ತದೆ ಎಂಬ ಭರವಸೆ ಮೂಡಿದೆ’ ಎಂದು ಗ್ರಾಮದ ವೈ.ಪಿ. ಕೃಷ್ಣಮೂರ್ತಿ ಹೇಳಿದರು.

ಈ ಸಮಯದಲ್ಲಿ ಹೊಂಗಡಹಳ್ಳ ಗ್ರಾ.ಪಂ. ಪಿಡಿಒ ಸಿ. ಸಂಜಯ್‌, ಜನಸ್ಪಂದನ ವೇದಿಕೆ ನಿರ್ದೇಶಕ ವಿನಯ್‌ ಬೆಳ್ಳೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.