ADVERTISEMENT

ಊರು ಬೆಳಗಲು ‘ಸೆಸ್ಕ್‌’ ಶ್ರಮ

ದುರಸ್ತಿ ಕಾರ್ಯದಲ್ಲಿ ತೊಡಗಿದ ಸೆಸ್ಕ್‌ ಅಧಿಕಾರಿ, ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:38 IST
Last Updated 10 ಆಗಸ್ಟ್ 2020, 4:38 IST
ಸಕಲೇಶಪುರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಬಿದ್ದಿರುವ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿ ಸೆಸ್ಕ್ ಸಿಬ್ಬಂದಿ ತೊಡಗಿರುವುದು
ಸಕಲೇಶಪುರ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಬಿದ್ದಿರುವ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿ ಸೆಸ್ಕ್ ಸಿಬ್ಬಂದಿ ತೊಡಗಿರುವುದು   

ಸಕಲೇಶಪುರ: ಒಂದು ವಾರದಿಂದ ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕುಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸೋಮವಾರ ಮಧ್ಯಾಹ್ನದೊಳಗೆ ಸಂಪರ್ಕ ಕಲ್ಪಿ ಸಲು ಸೆಸ್ಕ್‌ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ಉಪವಿಭಾ ಗಾಧಿಕಾರಿ ಎಂ.ಗಿರೀಶ್‌ ನಂದನ್‌ ಹೇಳಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮೂರು ತಾಲ್ಲೂಕುಗಳಲ್ಲಿ 725ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು, 10ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು ನೆಲಕ್ಕುರುಳಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ 8 ದಿನಗಳಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ ಎಂದರು.

ಸೆಸ್ಕ್‌ ಸೂಪರ್‌ಇಂಟೆಂಡಿಂಗ್‌ ಎಂಜಿನಿ ಯರ್‌ ಸುಚೇತನ್‌, ಕಾರ್ಯ ಪಾಲಕ ಎಂಜಿನಿಯರ್‌ ಜಗದೀಶ್‌, ಇತರ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದರು.

ADVERTISEMENT

ಹೆಚ್ಚುವರಿಯಾಗಿ 50 ಸಿಬ್ಬಂದಿ ನಿಯೋಜನೆ: ಮೂರು ತಾಲ್ಲೂಕುಗಳಲ್ಲಿ ವಿದ್ಯುತ್ ಸಂಪರ್ಕ ದುರಸ್ತಿ ಕಾಮಗಾರಿಗೆ ಮಂಡ್ಯ ಜಿಲ್ಲೆ, ಹೊಳೆನರಸೀಪುರ ಉಪ ವಿಭಾಗದಿಂದ 50 ಮಂದಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಪ್ರತ್ಯೇಕ 8 ತಂಡಗಳು (ಒಂದು ತಂಡದಲ್ಲಿ 8 ಮಂದಿ) ಕೆಲಸ ಮಾಡುತ್ತಿವೆ. ಪ್ರತಿ ತಂಡದಲ್ಲಿ ವಿದ್ಯುತ್‌ ಕಂಬವನ್ನು ನೆಡುವುದಕ್ಕಾಗಿ ಡ್ರಿಲ್ಲಿಂಗ್‌ ಯಂತ್ರ ಅಳವಡಿಸಿರುವ ಟ್ರಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಇಲಾಖೆ ಸಿಬ್ಬಂದಿ ರಾತ್ರಿ 12 ಗಂಟೆವರೆಗೂ ಕೆಲಸ ನಿರ್ವಹಿ ಸುತ್ತಿದ್ದಾರೆ ಎಂದು ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ಜಗದೀಶ್‌ ಹೇಳಿದರು.

₹ 10 ಸಾವಿರ ಪರಿಹಾರ: ಅತಿವೃಷ್ಟಿ ಯಿಂದ ಕುಸಿತಕ್ಕೆ ಒಳಗಾದ ಮನೆಗಳಲ್ಲಿ ಪಾತ್ರೆ, ಬಟ್ಟೆಗಳು ಹಾಳಾ ಗಿದ್ದರೆ ಅಂಥ ಕುಟುಂಬಗಳಿಗೆ ತಕ್ಷಣವೇ ₹ 10 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹೇಳಿದರು.

ತಹಶೀಲ್ದಾರ್‌ ಮಂಜುನಾಥ್ ಈಗಾಗಲೇ ಅಂತಹ ಸುಮಾರು 18 ಕುಟುಂಬಗಳನ್ನು ದಾಖಲಿಸಿಕೊಂಡಿ ದ್ದಾರೆ. ಅವರಿಗೆ ಚೆಕ್‌ ಮೂಲಕ ಪರಿಹಾರದ ಹಣ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಮನೆ ಚಾವಣಿ ಹಾನಿ, ಗೋಡೆ ಕುಸಿತ, ಮನೆ ಕುಸಿತ ಪ್ರಕರಣಗಳಿಗೆ ಪ್ರತ್ಯೇಕವಾಗಿ ಪರಿಹಾರ ವಿತರಣೆ ಮಾಡಲಾಗುವುದು ಎಂದರು.

ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಭತ್ತ, ಕಾಳುಮೆಣಸು ಹಾಗೂ ಇತರ ಬೆಳೆಗಳ ಹಾನಿ, ಕಾಫಿ ಮಂಡಳಿಯಿಂದ ಕಾಫಿ ಬೆಳೆ ಹಾನಿ ಬಗ್ಗೆ ವರದಿ ಸಂಗ್ರಹಿಸಲಾಗುವುದು ಎಂದರು.

ಅರ್ಜಿ ಸಲ್ಲಿಸಿ: ಅತಿವೃಷ್ಟಿಯಿಂದ ಮನೆ, ಬೆಳೆ, ಆಸ್ತಿಪಾಸ್ತಿಗೆ ಹಾನಿಯಾಗಿದ್ದರೆ ಪರಿಹಾರಕ್ಕೆ ದಾಖಲೆ ಸಮೇತ ಅರ್ಜಿ ತಾಲ್ಲೂಕು ಕಚೇರಿಗೆ ಅಥವಾ ನಾಡ ಕಚೇರಿಗಳಿಗೆ ಸಲ್ಲಿಸುವಂತೆ ತಹಶೀಲ್ದಾರ್‌ ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.