ಚನ್ನರಾಯಪಟ್ಟಣ: ಪ್ರಕೃತಿದೇವರು. ಪ್ರಕೃತಿಯನ್ನು ರಕ್ಷಿಸಬೇಕಾದ ಹೊಣೆ ಎಲ್ಲರ ಮೇಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಖಲಂದರ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಟೈಮ್ಸ್ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಟೈಮ್ಸ್ ಹಸಿರ ಸಿರಿ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಅರಣ್ಯ ನೀತಿ ಪ್ರಕಾರ ಭಾರತದಲ್ಲಿ ಶೇ33 ರಷ್ಟು ಪ್ರಮಾಣದಲ್ಲಿ ಕಾಡು ಇರಬೇಕು. ಸದ್ಯ ಶೇ 20 ರಷ್ಟು ಸಸ್ಯಸಂಪತ್ತು ಇದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರವನ್ನು ರಕ್ಷಣೆ ಮಾಡುವ ಹೊಣೆ ನಿಭಾಯಿಸಿದರೆ ಭವಿಷ್ಯದ ಜೀವನ ಚೆನ್ನಾಗಿರುತ್ತದೆ. ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡಬೇಕು ಎಂದು ಹೇಳಿದರು.
ಪರಿಸರವಾದಿ ಸಿ.ಎನ್. ಅಶೋಕ್ ಮಾತನಾಡಿ, ಕುಡಿಯುವ ನೀರು, ಗಾಳಿ ಮತ್ತು ವಾಯುಮಾಲಿನ್ಯ ಮಾಡದಂತೆ ಬದುಕು ಕಟ್ಟಿಕೊಳ್ಳಬೇಕು. ಜನ್ಮದಿನ, ವಿವಾಹ ಸೇರಿ ಶುಭ ಸಮಾರಂಭದಲ್ಲಿ, ಆಲದಮರ, ಗೋಣಿ, ಬಸರಿ, ಬೇವು ,ಹೊಂಗೆ ಸೇರಿ ದೇಸಿ ಗಿಡಗಳನ್ನು ನೆಡಬೇಕು ತಿಳಿಸಿದರು.
ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ದೇವಾನಂದ್ ಮಾತನಾಡಿ, ಟೈಮ್ಸ್ ಪಿಯು ಕಾಲೇಜಿನ 550 ವಿದ್ಯಾರ್ಥಿಗಳಿಗೆ ತಲಾ ಎರಡು ಗಿಡಗಳನ್ನು ನೀಡಲಾಗಿದೆ. ಅವುಗಳನ್ನು ನೆಟ್ಟು ಪೋಷಣೆ ಮಾಡುವರಿಗೆ ರೋಟರಿ ಕ್ಲಬ್ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿದರು. ರೋಟರಿ ಕ್ಲಬ್ ಸಹಾಯಕ ಗವರ್ನರ್ಗಳಾದ ನಿರ್ಮಲ್ಕುಮಾರ್ ಜೈನ್, ಸಂತೋಷ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ವಿ. ವಿಜಯ್, ಕಾರ್ಯದರ್ಶಿ ಎಸ್.ಎಸ್. ಕುಮುದಾ, ಪದಾಧಿಕಾರಿಗಳಾದ ಸಚಿನ್, ವಿಕ್ರಂ, ಕಾಲೇಜು ಪ್ರಾಂಶುಪಾಲ ಎಚ್.ಎಂ. ಶ್ರೀಕಂಠ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.