ಬೇಲೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲ್ಲೂಕಿನ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ಭುಜಕ್ಕೆ ಕಪ್ಪುಪಟ್ಟಿ ಧರಿಸಿ, ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಘೋಷಣೆ ಕೂಗಿದರು.
ಮುಸ್ಲಿಂ ಸಂಘಟನೆ ಪ್ರಮುಖ ಅಬ್ದುಲ್ ಸಮದ್ ಮಾತನಾಡಿ, ‘ಮಸೀದಿ, ಮದರಸಗಳ ಸ್ವಂತ ಜಮೀನು ಕಾಪಾಡಿಕೊಳ್ಳಲು ವಕ್ಫ್ ನ್ಯಾಯ ಮಂಡಳಿ ಇದೆ. ಈ ಮಂಡಳಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರ ನ್ಯಾಯಯುತವಾಗಿ ಆಡಳಿತ ನಡೆಸುತ್ತಿದ್ದೆಯೇ’ ಎಂದು ಪ್ರಶ್ನಿಸಿದರು.
‘ಒಡಿಶಾದ ಐದು ದೇವಾಲಯಗಳಲ್ಲಿ ಲಕ್ಷಾಂತರ ಎಕರೆ ಜಮೀನು ಇದೆ. ಹಾಗೆಯೇ ವಕ್ಫ್ನಲ್ಲಿ ಹಿಂದಿನಿಂದಲೂ ಜಮೀನಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ 99 ಸಾವಿರ ಜನ ಪ್ರಾಣ ತೆತ್ತಿದ್ದು, ಅದರಲ್ಲಿ 65 ಸಾವಿರ ಮುಸ್ಲಿಮರಿದ್ದಾರೆ. ಮುಸ್ಲಿಮರು ಈ ದೇಶಕ್ಕೆ ಋಣಿಯಾಗಿದ್ದು, ದೇಶದ ಕಾನೂನು, ಸಂವಿಧಾನವನ್ನು ಗೌರವಿಸುತ್ತಿದ್ದೇವೆ. ಆದರೂ ವಕ್ಫ್ ಮಂಡಳಿಯನ್ನು ಭ್ರಷ್ಟ ಸಂಸ್ಥೆಯಂತೆ ಬಿಂಬಿಸಿರುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಲೂರು, ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್ ಮಾತನಾಡಿ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ, ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿ, ಮುಸ್ಲಿಮರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸುತ್ತೇವೆ ಎಂದು ಹೇಳಿ, ತ್ರಿವಳಿ ತಲಾಕ್ನಲ್ಲಿ ಬದಲಾವಣೆ ಮಾಡಿದ್ದೀರಾ? ಬದಲಾವಣೆ ಮಾಡುವಂತೆ ನಿಮ್ಮನ್ನು ಯಾರಾದರೂ ಕೇಳಿದ್ರಾ’ ಎಂದು ಪ್ರಶ್ನಿಸಿದರು.
‘ಹೊಸ ಮಸೂದೆಯ ಪ್ರಕಾರ ಮುಸ್ಲಿಮೇತರ ಇಬ್ಬರು ವಕ್ಫ್ ಮಂಡಳಿಯ ಸದಸ್ಯರಾಗುತ್ತಾರೆ. ಮಂಡಳಿಗೆ ಯಾರು ನೇರವಾಗಿ ಆಸ್ತಿ ದಾನ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ಬಿ.ಎ.ಜಮಾಲೂದ್ದೀನ್ ಮಾತನಾಡಿದರು. ಮುಖಂಡರಾದ ಎಸ್.ಎ.ಅಬ್ದುಲ್ ಖಾದರ್, ನಹೀಮ್ ಉರ್ ರಹಮಾನ್, ತಾಜ್ ಮುಲ್ಲಾ ಪಾಷ, ಇಮ್ರಾನ್ ಪಾಷಾ, ಅಸ್ಲಂ, ನವೀದ್, ಅಕ್ರಂ ಪಾಷಾ, ದಾವೂದ್, ಗೆಂಡೇಹಳ್ಳಿ ಅಬ್ಬು, ನೂರ್ ಅಹಮ್ಮದ್, ಆರೀಫ್, ನಾಸೀರ್, ಅಬ್ರಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.