ADVERTISEMENT

ರಾಜ್ಯದಲ್ಲಿ ನಕಲಿ ಕಾಂಗ್ರೆಸ್: ರೇವಣ್ಣ ಕಿಡಿ

ಜೆಡಿಎಸ್‌ ಮುಗಿಸಲು ಸಂಚು

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 3:49 IST
Last Updated 5 ಜುಲೈ 2022, 3:49 IST
ರೇವಣ್ಣ
ರೇವಣ್ಣ   

ಹಾಸನ: ‘ಮಹಾತ್ಮಗಾಂಧಿ, ನೆಹರು ಅವರ ಕಾಂಗ್ರೆಸ್ ಹೋಗಿ, ರಾಜ್ಯದಲ್ಲಿ ಇಂದು‌ ನಕಲಿ‌ ಕಾಂಗ್ರೆಸ್ ಇದೆ. ಅಧಿಕಾರಕ್ಕಾಗಿ ಇಂದಿನ ಕಾಂಗ್ರೆಸ್‌ ನಾಯಕರು ಯಾರ ಮನೆ ಬಾಗಿಲು‌ ಬೇಕಾದರೂ ತಟ್ಟುತ್ತಾರೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು‌.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಚುನಾವಣೆಗೆ ನಿಲ್ಲಿಸಿ ಹಿಂದಿನಿಂದ ಚೂರಿ‌ ಹಾಕುತ್ತಾರೆ. ದೇವೇಗೌಡರು‌ ಹಾಗೂ ನಿಖಿಲ್ ಕುಮಾರಸ್ವಾಮಿ ಸೋಲಿಸಲು ಬಿಜೆಪಿ‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಅವರದೇ ಪಕ್ಷದ ಮುನಿಯಪ್ಪ ಅವರ ಸೋಲಿಗೂ ಕಾರಣರಾದರು. ಇವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಯಾವ ನೈತಿಕೆಯೂ ಇಲ್ಲ’ ಎಂದರು.

‘ಕಾಂಗ್ರೆಸ್ -ಬಿಜೆಪಿ ಹೊಂದಾಣಿಕೆ ರಾಜಕಾರಣದ ಮೂಲಕ ಜೆಡಿಎಸ್ ಮುಗಿಸಲು ಸಂಚು ರೂಪಿಸಿವೆ‌. ರಾಜ್ಯಸಭಾ ಚುನಾವಣೆಯಲ್ಲಿ ಸೋನಿಯಾಗಾಂಧಿ ಹೇಳಿದರೂ, ಕೊನೆಗಳಿಯಲ್ಲಿ‌ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. 2018ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮಾಡಿದ ಅಪಪ್ರಚಾರ ದಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು’ ಎಂದು ದೂರಿದರು.

ADVERTISEMENT

‘ಸಮ್ಮಿಶ್ರ ಸರ್ಕಾರದಲ್ಲಿ 14 ತಿಂಗಳ ಏನು ನಡೆದಿತ್ತು ಎಂಬುದನ್ನು ಕಾಲ ಬಂದಾಗ ಹೇಳುತ್ತೇನೆ. 15 ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು‌ ಯಾರು? ಮಂತ್ರಿಮಂಡಲ ರಚನೆಯನ್ನು ಸರಿಯಾಗಿ ಮಾಡಿದ್ದರೆ ಅತೃಪ್ತ ಶಾಸಕರು‌ ಬಿಜೆಪಿ ಸೇರುತ್ತಿರಲಿಲ್ಲ. ಆದರೆ ಪ್ರಾದೇಶಿಕ ಪಕ್ಷ ಮುಗಿಸಬೇಕು‌ ಎಂಬ‌ ಹುನ್ನಾರದಿಂದ ಬಿಜೆಪಿ ಜೊತೆ ಕೈಜೋಡಿಸಿದರು’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.