ಹಾಸನ: ತಾಲ್ಲೂಕಿನ ರಾಮದೇವರಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಎರಡು ಆನೆಗಳು ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಗ್ರಾಮದ ಆರ್.ಸುಗಂದರಾಜು ಅವರ ಹೊಲದಲ್ಲಿ ಜೋಳ ತಿಂದು, ಪೈಪ್ ಗಳನ್ನೂ ಮುರಿದು ಹಾಕಿವೆ. ಜೋಳಕ್ಕೆ ಮುಚ್ಚಿದ್ದ ಟಾರ್ಪಲ್ ಸಹ ಹರಿದು ಹಾಕಿವೆ.
ಸಾವಿತ್ರಮ್ಮ ವೆಂಕಟೇಶ್ ಅವರಿಗೆ ಸೇರಿದ 25 ಕ್ಕೂ ಹೆಚ್ಚು ತೆಂಗಿನ ಸಸಿ, ಸಪೋಟ ಗಿಡಗಳಿಗೂ ಹಾನಿಯಾಗಿದೆ. ಆನೆಗಳ ಕಾಲ್ತುಳಿತಕ್ಕೆ ಸಿಲುಕಿ ಹತ್ತಾರು ವರ್ಷಗಳ ಫಸಲು ನೀಡಬೇಕಾದ ಗಿಡಗಳು ಮುರಿದು ಬಿದ್ದಿವೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೆಳೆದಿದ್ದ ಫಸಲನ್ನು ತಿಂದು ನಷ್ಟ ಉಂಟು ಮಾಡಿವೆ.
ಬೆಳೆ ನಾಶದಿಂದ ರೈತರು ಆತಂಕಗೊಂಡಿದ್ದು, ಜಮೀನಿಗೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಕೂಡಲೇ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು’ ಎಂದು ರಾಮದೇವಪುರದ ರೈತ ಆರ್. ಎಲ್. ಸುಗಂದರಾಜು, ಜಯಮ್ಮ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.