ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಗ್ರಾಮಗಳಲ್ಲಿಗುರುವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.
ಕೊಡಗಿನ ಗಡಿ ಭಾಗದ ಗ್ರಾಮಗಳಾದ ಮಾಗೋಡು, ನೆಲಬಳ್ಳಿ, ಪಾರಸನಹಳ್ಳಿ, ಮದಲಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ 8 ಆನೆಗಳ ಗುಂಪು ಜಮೀನಿಗೆ ನುಗ್ಗಿ ಭತ್ತ, ರಾಗಿ, ಕಾಫಿ, ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ನಾಶಗೊಳಿಸಿವೆ. ಕೊಳವೆ ಬಾವಿಯಿಂದ ಜಮೀನಿಗೆ ನೀರು ಹಾಯಿಸಲು ಅಳವಡಿಸಿದ್ದ ಪೈಪ್ಗಳನ್ನು ತುಳಿದು ಹಾಳು ಮಾಡಿವೆ.
ಸಂಜೆ 6 ಗಂಟೆ ಆಗುತ್ತಿದ್ದಂತೆ ಕಾಡಾನೆಗಳು ಜಮೀನಿಗೆ ದಾಳಿ ಇಟ್ಟು ಬೆಳೆ ಹಾನಿ ಮಾಡುವುದಲ್ಲದೇ, ಬೆಳಿಗ್ಗೆ 6 ಗಂಟೆಯವರೆಗೂ ಬೀಡು ಬಿಟ್ಟಿರುತ್ತವೆ. ಸಂಜೆಯಾದರೆ ಜನರು ಆನೆಗಳ ಭೀತಿಯಿಂದ ಮನೆಯಿಂದ ಹೊರ ಬರಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಅರಣ್ಯ ಇಲಾಖೆ ಆನೆಗಳ ಹಾವಳಿ ತಪ್ಪಿಸಬೇಕು. ನಷ್ಟಕ್ಕೊಳಗಾದ ರೈತರಿಗೆ ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಸಿ.ದೇವರಾಜೇಗೌಡ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.