ಹಾಸನ: ‘ಆಂಗ್ಲ ಮಾಧ್ಯಮ ಶಾಲೆ ಬೇಡ ಎನ್ನುವುದಾದರೆ ಕೇವಲ ಕನ್ನಡ ಶಾಲೆ ಮಾತ್ರ ಇರಲಿ’ ಎಂದು ಪ್ರತಿಪಾದಿಸಿದ ಸಚಿವ ಎಚ್.ಡಿ.ರೇವಣ್ಣ, ‘ಸಾಹಿತಿಗಳು ಸೇರಿದಂತೆ ಯಾರ್್ಯಾರು ವಿರೋಧ ಮಾಡುತ್ತಿದ್ದಾರೋ ಅವರೆಲ್ಲಾ ಸೇರಿ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿಸಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಐಟಿಐ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, "ಬಡವರು, ಕೂಲಿ ಕಾರ್ಮಿಕರು ಮಕ್ಕಳೂ ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕು. ಅದಕ್ಕಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರತಿ ತಾಲ್ಲೂಕಿನಲ್ಲಿ ನಾಲ್ಕು ಸರ್ಕಾರಿ ಶಾಲೆ ತೆರೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಚರ್ಚಿಸಲಾಗಿದೆ.
ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬರೀ ರೇವಣ್ಣ ಅಥವಾ ಕುಮಾರಣ್ಣನ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮದಲ್ಲಿ ಓದಿದರೆ ಸಾಲದು. ಬಡವರ ಮಕ್ಕಳು ₹ 70 ಸಾವಿರ ಡೋನೆಷನ್ ಕೊಟ್ಟು ಓದಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಿ, ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.
ಸಿದ್ಧಗಂಗಾ ಸ್ವಾಮೀಜಿ ದೇವರ ಸಮಾನ. ಅವರಿಗೆ ಭಾರತ ರತ್ನ ಗೌರವ ನೀಡಲೇಬೇಕೆಂಬುದು ನನ್ನ ಅಭಿಪ್ರಾಯ. ಜತೆಗೆ ಸರ್ಕಾರ ಸಹ ಒತ್ತಾಯಿಸಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.