ಅರಸೀಕೆರೆ: ಕೃಷಿ ನಂತರ ಕೈಗಾರಿಕಾ ಕ್ಷೇತ್ರ ದೊಡ್ಡ ಶಕ್ತಿಯಾಗಿ ಬೆಳೆದಾಗ ಮಾತ್ರ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲ್ಲೂಕಿನ ತಳಲೂರು ಗ್ರಾಮ ಪಂಚಾಯಿತಿಯ ಹೊನ್ನೆನಹಳ್ಳಿ ಗ್ರಾಮದ ನಿಂಗರಾಜು ಅವರಿಗೆ ಆದಿ ಜಾಂಬವ ಅಭಿವೃದ್ಧಿ ನಿಗಮದಿಂದ ಉದ್ಯಮಶೀಲತಾ ಯೋಜನೆಯಲ್ಲಿ ₹4 ಲಕ್ಷ ರೂಪಾಯಿ ಸಬ್ಸಿಡಿ ಧನದೊಂದಿಗೆ ಕಾರು ನೀಡಿ ಮಾತನಾಡಿದರು.
ನಿರುದ್ಯೋಗ ನಿವಾರಣೆಯಾದಾಗ ಮಾತ್ರ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಸಾಧ್ಯ. ಈಗಾಗಲೇ ನಗರದ ಗಾರ್ಮೆಂಟ್ಸ್ಗಳಲ್ಲಿ ಸಾವಿರಾರು ಪುರುಷರು ಹಾಗೂ ಮಹಿಳೆಯರು ಕೆಲಸಗಳು ಮಾಡುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ನಿರುದ್ಯೋಗ ನಿವಾರಣೆಯಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಸೇರಿದಂತೆ ಇತರೆ ಭಾಗಗಳಿಂದ ಉದ್ಯೋಗ ಅರಸಿ ಬರುವ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕ್ಷೇತ್ರದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಗಮನ ಹರಿಸಲಾಗುವುದು ಎಂದರು.
ಸಮಾಜ ಅಭಿವೃದ್ಧಿಯಾಗಬೇಕಾದರೆ ನಿರುದ್ಯೋಗ ದೂರವಾಗಬೇಕು. ಆದ್ದರಿಂದ ಉದ್ಯಮ ಶೀಲತಾ ಯೋಜನೆಯಲ್ಲಿ ಸಬ್ಸಿಡಿ ಮೂಲಕ ಧನ ಸಹಾಯವನ್ನು ಸರ್ಕಾರ ನೀಡುತ್ತಿದ್ದು, ಯುವಕರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಧರ್ಮಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮೂರ್ತಿ, ಗುರುಮೂರ್ತಿ, ಕೆಲ್ಲೆಂಗೆರೆ ಕುಮಾರ್, ಮುಖಂಡರಾದ ಸಿಕಂದರ್ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.