ಹೆತ್ತೂರು: ಅರಣ್ಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ, ಪರಿಸರ ಉಳಿಯಬೇಕಾದರೆ ಗಿಡಗಳನ್ನು ನೆಟ್ಟು ಅರಣ್ಯಗಳನ್ನು ಬೆಳೆಸಬೇಕು ಎಂದು ಯಸಳೂರು ವಲಯ ಅರಣ್ಯಾಧಿಕಾರಿ ಜಗದೀಶ್ ಜಿ.ಆರ್. ತಿಳಿಸಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವಿಪೂರ್ವ ಕಾಲೇಜು ವಿಭಾಗದ ಆವರಣದಲ್ಲಿ ರಾಷ್ಟ್ರೀಯ ವನಮಹೋತ್ಸವ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವನಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಕಾಡು ಉಳಿದರೆ ನಾಡು ಉಳಿದಂತೆ. ಆದ್ದರಿಂದ ಗಿಡ ಮರಗಳನ್ನು ಬೆಳೆಸುವುದರಿಂದ ಅಂತರ್ಜಲದ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಮಳೆಯಾಗುತ್ತದೆ. ನದಿ ಮೂಲ ಇರುವುದೇ ಅರಣ್ಯ ಪ್ರದೇಶದಲ್ಲಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಒಂದು ವೇಳೆ ಅರಣ್ಯ ನಾಶವಾದರೆ ಅದರ ಜೊತೆಗೆ ಹರಿಯುವ ನದಿಯೂ ನಾಶವಾಗುತ್ತದೆ. ನದಿ ನಾಶವಾದರೆ ಕುಡಿಯುವ ನೀರೂ ಸಿಕ್ಕುವುದಿಲ್ಲ. ಹಾಗಾಗಿ ನದಿಯ ಉಳಿವಿಗೆ ಅರಣ್ಯ ಸಂರಕ್ಷಣೆ ಅತ್ಯಗತ್ಯ ಎಂದು ವಿವರಿಸಿದರು.
ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಜಿ.ಎಸ್., ಬೀಟ್ ಫಾರೆಸ್ಟ್ ಆಫೀಸರ್ ನವೀನ್, ಪ್ರಾಂಶುಪಾಲ ಮಂಜುನಾಥ ಬಿ.ಡಿ., ಯಸಳೂರು ವಲಯದ ಅರಣ್ಯ ಸಿಬ್ಬಂದಿ ವರ್ಗ, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.