ADVERTISEMENT

ಮಾಡಾಳು ಗ್ರಾಮದ ಐತಿಹಾಸಿಕ ಸ್ವರ್ಣಗೌರಿ ದೇವಿ ಪ್ರತಿಷ್ಠಾಪನೆ, ವಿಸರ್ಜನೆ

ಸಾಂಕೇತಿಕವಾಗಿ ನಡೆದ ಮಹೋತ್ಸವ; ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:43 IST
Last Updated 10 ಸೆಪ್ಟೆಂಬರ್ 2021, 5:43 IST
ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ದೇವಿಯ ವಿಸರ್ಜನಾ ಮಹೋತ್ಸವ ನೆರವೇರಿತು
ಅರಸೀಕೆರೆ ತಾಲ್ಲೂಕಿನ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ದೇವಿಯ ವಿಸರ್ಜನಾ ಮಹೋತ್ಸವ ನೆರವೇರಿತು   

ಅರಸೀಕೆರೆ: ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಐತಿಹಾಸಿಕ ಸ್ವರ್ಣಗೌರಿ ದೇವಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವ ಗುರುವಾರ ಸಾಂಕೇತಿಕವಾಗಿ ನಡೆಯಿತು.

ಮಧ್ಯಾಹ್ನ 12 ಗಂಟೆಗೆ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ವರ್ಣಗೌರಿ ದೇವಿಗೆ ಮೂಗುತಿ ಧರಿಸುವ ಮೂಲಕ ಅಮ್ಮನವರನ್ನು ಗ್ರಾಮದ ಸ್ವರ್ಣಗೌರಿ ದೇವಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ದೇವಿಗೆ ವಿಶೇಷ ಪೂಜೆ ಹಾಗೂ ನೈವೇದ್ಯ, ಮಹಾಮಂಗಳಾರತಿ, ದುಗ್ಗುಳ ಸೇವೆ, ಮಡಿಲಕ್ಕಿ ತುಂಬುವ ಸೇವೆನೆರವೇರಿತು. 2 ಗಂಟೆಗೆ ಕಲ್ಯಾಣಿಯಲ್ಲಿ ಸ್ವರ್ಣಗೌರಿ ದೇವಿಯನ್ನು ವಿಸರ್ಜಿಸಲಾಯಿತು. ಕಲ್ಯಾಣಿ ಸುತ್ತಲೂ ನಡೆದ ಕರ್ಪೂರದ ದುಗ್ಗುಳ ಸೇವೆಯನ್ನು ಭಕ್ತರು ಹಾಗೂ ಗ್ರಾಮಸ್ಥರು ಕಣ್ತುಂಬಿಕೊಂಡರು.

ಸಚಿವ ಮಾಧುಸ್ವಾಮಿ ಹಾಗೂ ಶಾಸಕ ಕೆ. ಎಂ. ಶಿವಲಿಂಗೇಗೌಡ ಆಗಮಿಸಿ ಸ್ವರ್ಣಗೌರಿ ದೇವಿಯ ದರ್ಶನ ಪಡೆದರು.

ADVERTISEMENT

ಸ್ವರ್ಣಗೌರಿ ದೇವಿಯ ದೇವಾಲಯದ ಸೇವಾ ಸಮಿತಿ ಮುಖ್ಯಸ್ಥ ಶಿವಲಿಂಗಪ್ಪ ಮಾತನಾಡಿ, ‘160 ವರ್ಷಗಳ ಹಿನ್ನೆಲೆ ಹೊಂದಿರುವ ಉತ್ಸವವು ಪ್ರತಿ ವರ್ಷ 9 ದಿನಗಳವರೆಗೆ ನಡೆಯುತ್ತಿತ್ತು. ಹರಕೆ ಹೊರುವುದು ಮತ್ತು ಕೋರಿಕೆಗಳ ಈಡೇರಿಕೆಯ ಸಂಕಲ್ಪ ಮಾಡುವುದು, ದೇವಿಗೆ ದುಗ್ಗುಳ ಸೇವೆ, ಸೀರೆ ಮತ್ತು ರವಿಕೆ ಸಮರ್ಪಿಸುವುದು, ಅನ್ನಸಂತರ್ಪಣೆ ಸೇವೆ ನಡೆಯುತ್ತಿತ್ತು. ಆದರೆ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಭಕ್ತರು ಹರಕೆ ತೀರಿಸಲು ಮತ್ತು ಸಂಕಲ್ಪ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶವು ಕೋವಿಡ್‌ನಿಂದ ಪಾರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.