ಹಾಸನ: ಉತ್ತರ ಪತ್ರಿಕೆಯಲ್ಲಿನ ಸರಿಯುತ್ತರಗಳನ್ನು ಉದ್ದೇಶಪೂರ್ವಕವಾಗಿ ಹೊಡೆದು ಹಾಕಿದ ಆರೋಪದಡಿ, ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಚಾರ್ಯೆ ಶೋಭಾ ದೇವಮಾನೆ ವಿರುದ್ಧ, ಬಡಾವಣೆ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ, ವಿಜಯಪುರದ ವಿದ್ಯಾರ್ಥಿ ಚನ್ನಯ್ಯ ದೂರು ನೀಡಿದ್ದಾರೆ.
‘ಪ್ರಥಮ ಮತ್ತು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದ ನಾನು, ಅಂತಿಮ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇನೆ. ಈ ಫಲಿತಾಂಶದಿಂದ ವಿಚಲಿತನಾಗಿ ಉತ್ತರ ಪತ್ರಿಕೆಯ ಫೋಟೋ ಕಾಪಿ ತರಿಸಿಕೊಂಡು ನೋಡಿದಾಗ ನನ್ನ ಉತ್ತರವನ್ನು ಹೊಡೆದು ಹಾಕಿ ಆನಂತರ ಸ್ಕ್ಯಾನ್ ಮಾಡಿ ಕೇಂದ್ರ ಕಚೇರಿಗೆ ಕಳುಹಿಸಿರುವುದು ತಿಳಿದು ಬಂದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪರೀಕ್ಷಾ ನಿಯಮದ ಪ್ರಕಾರ, ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಿಕೊಡಬೇಕು. ದುರುದ್ದೇಶದಿಂದ, ಪ್ರಾಚಾರ್ಯರು ಕಾಲೇಜಿನ ಕೆಲ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸರಿಯುತ್ತರಗಳನ್ನು ಹೊಡೆದು ಹಾಕಿದ್ದಾರೆ. ಇದರಿಂದ ನನ್ನ ಭವಿಷ್ಯ ಅತಂತ್ರವಾಗಿದ್ದು, ನ್ಯಾಯ ದೊಕಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಶೋಭಾ ದೇವಮಾನೆ ಅವರಿಗೆ ದೂರವಾಣಿ ಮಾಡಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.