ADVERTISEMENT

ರೈತ, ಕಾರ್ಮಿಕರ ಪರ ಶಾಸನ ರೂಪಿಸಿ

ಸಿಐಟಿಯು ವತಿಯಿಂದ ಶಾಸಕ ಪ್ರೀತಂ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 14:03 IST
Last Updated 22 ಫೆಬ್ರುವರಿ 2021, 14:03 IST
ಹಾಸನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಆವರಣದಲ್ಲಿರುವ ಶಾಸಕ ಪ್ರೀತಂ ಗೌಡ ಕಚೇರಿ ಎದುರು ಸಿಐಟಿಯು ವತಿಯಿಂದ ಧರಣಿ ನಡೆಸಲಾಯಿತು.
ಹಾಸನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಆವರಣದಲ್ಲಿರುವ ಶಾಸಕ ಪ್ರೀತಂ ಗೌಡ ಕಚೇರಿ ಎದುರು ಸಿಐಟಿಯು ವತಿಯಿಂದ ಧರಣಿ ನಡೆಸಲಾಯಿತು.   

ಹಾಸನ: ರಾಜ್ಯ ಬಜೆಟ್ ಅಧಿವೇಶನದಲ್ಲಿ ರೈತರ, ಕಾರ್ಮಿಕರ ಮತ್ತು ಜನಸಾಮಾನ್ಯರ ಪರವಾಗಿ ಶಾಸನ
ರೂಪಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕ
ಪ್ರೀತಂ ಗೌಡ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ವಿದ್ಯುತ್ ಖಾಸಗೀಕರಣ ಮಸೂದೆ, ಖಾಸಗೀಕರಣ ನೀತಿ ಹಿಂಪಡೆಯಬೇಕು ಹಾಗೂ ಕಾರ್ಮಿಕರ ಮತ್ತು
ರೈತರ ಆದಾಯ ಹೆಚ್ಚಳಕ್ಕೆ ಕಾರ್ಮಿಕರಿಗೆ ತಿಂಗಳಿಗೆ ₹ 24 ಸಾವಿರ ಕನಿಷ್ಟ ವೇತನ ನೀಡಬೇಕು.
ಕರ್ನಾಟಕ ಭೂ ಸೂಧಾರಣೆ ಕಾಯ್ದೆ ತಿದ್ದುಪಡಿ ರದ್ದುಗೊಳಿಸಬೇಕು. ರೈತರ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ
ಕನಿಷ್ಟ ಬೆಂಬಲ ಬೆಲೆ ನಿಗದಿಗೆ ಶಾಸನಾತ್ಮಕ ಕಾಯ್ದೆ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು
ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಮಾತನಾಡಿ, ಅಂಗನವಾಡಿ, ಬಿಸಿಯೂಟ, ಮತ್ತು
ಆಶಾ ಕಾರ್ಯಕರ್ತೆಯರ ಕೆಲಸ ಕಾಯಂ, ಕನಿಷ್ಟ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಜಾರಿ ಮಾಡಬೇಕು.
ಕೊರೊನಾ ಸೋಂಕಿನಿಂದ ಮೃತರಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ
ಕೂಡಲೇ ಪರಿಹಾರ ನೀಡಬೇಕು. ಬಿಸಿಯೂಟ ನೌಕರರಿಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನ
ಪಾವತಿಯಾಗಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು ಹಾಗೂ
ಇತರೆ ಹೆಚ್ಚುವರಿ ಕೆಲಸಗಳನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನೀಡುವುದರಲ್ಲಿ ಕೊರತೆಯಾಗಿರುವ ₹380 ಕೋಟಿ
ಹಣವನ್ನು ಬಿಡುಗಡೆ ಮಾಡಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಬೇಕು. ಕರ ವಸೂಲಿ, ಕ್ಲರ್ಕ್ ಹುದ್ದೆಗಳಿಗೆ ಬಡ್ತಿ
ತಡೆಹಿಡಿದಿರುವ ಆದೇಶಗಳನ್ನು ಹಿಂದಕ್ಕೆ ಪಡೆಯಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಬೇಕು
ಎಂದು ಆಗ್ರಹಿಸಿದರು.

ADVERTISEMENT

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಕಾರ್ಯದರ್ಶಿ ಅರವಿಂದ್‌, ಅಂಗನವಾಡಿ ನೌಕರರ ಸಂಘದ ಜಿಲ್ಲಾ
ಕಾರ್ಯದರ್ಶಿ ಜಯಂತಿ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಖಜಾಂಚಿ ಕಲಾ, ದಲಿತ ಹಕ್ಕುಗಳ ಸಮಿತಿ
ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.