ಬೇಲೂರು: ಗ್ಯಾರಂಟಿ ಯೋಜನೆ ಶೇ 100ರ ಸಾಧನೆಗಾಗಿ, ನೋಂದಣಿ ಆಗಿರದ ಫಲಾನುಭವಿಗಳ ಮನೆಗೆ ತೆರಳಿ, ನೋಂದಣಿ ಮಾಡಿಸಲಾಗುವುದು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದಮೂರ್ತಿ ತಿಳಿಸಿದರು.
ಶನಿವಾರ ಇಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಲು ತಾಲ್ಲೂಕಿನ 89 ಮಹಿಳೆಯರು ನೋಂದಣಿ ಮಾಡಿಕೊಂಡಿಲ್ಲ ಹಾಗೂ ಸಾಕಷ್ಟು ಜನ ಗೃಹಜ್ಯೋತಿ ಪ್ರಯೋಜನವನ್ನು ಸಹ ಪಡೆದುಕೊಂಡಿಲ್ಲ ಅಂಥವರನ್ನು ಸಮಿತಿ ಸದಸ್ಯರು, ನಾನು ಭೇಟಿ ಮಾಡಿ ನೋಂದಣಿ ಮಾಡಿಸುತ್ತೇವೆ ಎಂದು ತಿಳಿಸಿದರು.
‘ಅನ್ನಭಾಗ್ಯ ಯೋಜನೆಯಲ್ಲಿ ಪಡಿತರವನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಬಗ್ಗೆಹರಿಸಿದ್ದೇವೆ. ಶಕ್ತಿ ಯೋಜನೆಯ ಪ್ರಗತಿಗೆ ಬಸ್ಗಳ ಕೊರತೆ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ್ದರಿಂದ 4 ಹೊಸ ಬಸ್ ಅನ್ನು ಬೇಲೂರು ಬಸ್ ಡಿಪೋ ನೀಡಿದ್ದು ಇನ್ನು 10 ಬಸ್ ನೀಡಿ, ಚಾಲಕ ಮತ್ತು ನಿರ್ವಾಹಕರ ವ್ಯವಸ್ಥೆ ಮಾಡುವಂತೆ ಕೋರಿದ್ದೇನೆ’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ವಸಂತ್ ಕುಮಾರ್, ಆಹಾರ ಇಲಾಖೆಯ ಸಿರಸ್ತೀದಾರ್ ಗಿಂತಾಜಲಿ, ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿ ರಮ್ಯ, ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಸದಸ್ಯರಾದ ಶರತ್, ಪ್ರತಾಪ್, ಸುರೇಶ್, ಮಹೇಶ್, ಇಂದ್ರೇಶ್, ಚಂದ್ರಶೇಖರ್, ಅಬ್ಬಿಬ್, ಮನ್ಸೂರ್ ಅಹಮ್ಮದ್, ಅಶೋಕ್, ನಿಶ್ಚಲ್, ವಿಶಾಲಕ್ಷಿ, ಧರ್ಮಭೋವಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.