ಹೊಳೆನರಸೀಪುರ: ‘ಗುಡಿಸಲು ಮುಕ್ತ ಸಮಾಜದ ನಿರ್ಮಾಣದ ಕನಸನ್ನು ನನಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸಿದ್ದು, ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ₹75 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.
ತಾಲೂಕಿನ ಕೆಲವು ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯದ ಜನರ ಸ್ಥಿತಿಗತಿ ಕುರಿತು ಖುದ್ದಾಗಿ ಆಯ ಗ್ರಾಮಗಳಿಗೆ ಭೇಟಿ ನೀಡಲು ಬಂದಿದ್ದ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ವಸತಿ ಮತ್ತು ನಿವೇಶನ ರಹಿತ ಅಲೆಮಾರಿ ಸಮುದಾಯದವರಿಗೆ ಸವಲತ್ತುಗಳನ್ನು ಒದಗಿಸಿಕೊಡಲು ವಿಶೇಷವಾಗಿ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ’ ಎಂದರು.
ತಾಲ್ಲೂಕಿನ ಅಗ್ರಹಾರ ಗೇಟ್ ಬಳಿ ಅಲೆಮಾರಿ ಸಮುದಾಯದವರು ವಾಸ ಮಾಡುತ್ತಿದ್ದು, ಅವರಿಗೆ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಸಂಬಂಧಪಟ್ಟವರು ಕಾಳಜಿ ವಹಿಸದ ಪರಿಣಾಮ ಇಂದಿಗೂ ಸಹ ಕೆಟ್ಟ ಪರಿಸ್ಥಿತಿಯಲ್ಲಿ ಹೀನಾಯವಾಗಿ ಬದುಕು ಸಾಗುತ್ತಿದೆ ಎಂದು ಎಂದು ಹಲವರು ಪಲ್ಲವಿ ಅವರ ಗಮನ ಸೆಳೆದರು.
ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಜಿ.ಪಲ್ಲವಿ, ಗುರುವಾರ ಬೆಳಿಗ್ಗೆ ಆ ಗ್ರಾಮಕ್ಕೆ ನಾನು ತೆರಳಲಿದ್ದು, ಆ ಗ್ರಾಮ ಸಂಪೂರ್ಣ ಶುಚಿತ್ವದಿಂದ ಕೂಡಿರಬೇಕು. ಸ್ವಚ್ಛಗೊಳಿಸುವ ವಿಷಯದಲ್ಲಿ ಇಂದೇ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ತಾಲ್ಲೂಕು ಕಚೇರಿ ಸಿಬ್ಬಂದಿ ಸತೀಶ್ ಸಾವನ್ನಪ್ಪಿದ್ದು, ಕಚೇರಿಯ ಮುಂಭಾಗದಲ್ಲಿ ಇರಿಸಿದ್ದ ಮೃತದೇಹದ ಬಳಿ ತೆರಳಿ ಸಂತಾಪ ಶ್ರದ್ಧಾಂಜಲಿ ಸಲ್ಲಿಸಿದ ಪಲ್ಲವಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ, ಪಲ್ಲವಿ ಅವರನ್ನು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.