ಹಳೇಬೀಡು: ಗಣೇಶಮೂರ್ತಿ ಮಾರಾಟಕ್ಕೆ ಹೊರ ಜಿಲ್ಲೆ ಹಾಗೂ ಬೇರೆ ತಾಲ್ಲೂಕಿನ ವರ್ತಕರು ಇಲ್ಲಿಗೆ ಬಂದಿದ್ದು, ಸ್ಥಳೀಯರ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.
ಕಳೆದ ವರ್ಷದಿಂದಲೇ ಹೊರಗಿನಿಂದ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹೊರಗಿನಿಂದ ಬಂದವರು ವಿಶಿಷ್ಟವಾದ ಗಣೇಶ ಮೂರ್ತಿ ತಂದು ಜೋಡಿಸಿದ್ದರಿಂದ ಸ್ಥಳೀಯರ ವ್ಯಾಪಾರಕ್ಕೆ ಹೊಡೆತ ಬಿತ್ತು. ನಷ್ಟ ಅನುಭವಿಸಿದ ಸ್ಥಳೀಯರು ಈ ವರ್ಷ ವ್ಯಾಪಾರಕ್ಕೆ ಹಿಂದೇಟು ಹಾಕಿದಂತೆ ಕಾಣುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರದವರು ಎರಡು ಕಡೆ ಗಣೇಶಮೂರ್ತಿಗಳನ್ನು ಇಟ್ಟಿರುವುದನ್ನು ಹೊರತುಪಡಿಸಿದರೆ, ಪೇಟೆ ಬೀದಿಯಲ್ಲಿ ಸ್ಥಳೀಯರ ಗಣೇಶಮೂರ್ತಿ ಅಂಗಡಿಗಳು ಕಂಡು ಬಂದಿಲ್ಲ. ಹೊರಗಿನಿಂದ ಬಂದವರು ಸ್ಥಳೀಯರಿಗಿಂತ ಹೆಚ್ಚಿನ ಮೂರ್ತಿಗಳನ್ನು ತಂದಿದ್ದಾರೆ. ಹೀಗಾಗಿ ಕಳೆದ ವರ್ಷದಿಂದ ಸ್ಥಳೀಯರ ವ್ಯಾಪಾರಕ್ಕೆ ತೊಡಕಾಗಿದೆ ಎನ್ನುವ ಅಳಲು ಇಲ್ಲಿನ ಮೂರ್ತಿಕಾರರದ್ದು.
ಕಳೆದ ವರ್ಷ ಅರಸೀಕೆರೆ ತಾಲ್ಲೂಕಿನ ತಯಾರಕರು ಗಣೇಶ ಮೂರ್ತಿ ಮಾರಾಟ ಮಾಡಿದ್ದರು. ಈ ವರ್ಷವೂ ತಯಾರಕರು ಮಾರಾಟಕ್ಕೆ ಬರುವ ಸಾಧ್ಯತೆ ಇರುವುದರಿಂದ ಸ್ಥಳೀಯರು ಗಣೇಶಮೂರ್ತಿಗಳನ್ನು ಮಾರಾಟಕ್ಕೆ ಇಡುವ ಲಕ್ಷಣ ಕಾಣುತ್ತಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರದಿಂದ ಬಂದಿರುವ ವರ್ತಕರು ಅಕರ್ಷಕ ಗಣೇಶ ಮೂರ್ತಿಗಳನ್ನು ಬೇಲೂರು ರಸ್ತೆಯ ಎರಡು ಸ್ಥಳಗಳಲ್ಲಿ ಜೋಡಿಸಿದ್ದಾರೆ. ಇವರು ತಯಾರಕರಲ್ಲದಿದ್ದರೂ ವಿಭಿನ ವೈಶಿಷ್ಟ್ಯವಾದ ಗಣೇಶ ಮೂರ್ತಿಗಳನ್ನು ತಂದಿದ್ದಾರೆ.
ವ್ಯಾಪಾರ ಇನ್ನೂ ಬಿರುಸು ಕಾಣದಿದ್ದರೂ, ಗಣೇಶಮೂರ್ತಿಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಅದರಲ್ಲಿಯೂ ಮಕ್ಕಳು ಶಾಲೆ ಬಿಟ್ಟ ನಂತರ ಗಣೇಶ ಮೂರ್ತಿಗಳನ್ನು ಜೋಡಿಸಿಟ್ಟಿರುವ ಸ್ಥಳ ಬಿಟ್ಟು ಕದಲುತ್ತಿಲ್ಲ. ಮಕ್ಕಳು ಮೂರ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಬಿಡುವಿಲ್ಲದಂತೆ ಮೂರ್ತಿಗಳ ಬೆಲೆ ಕೇಳುವುದರಲ್ಲಿ ಕಳೆಯುತ್ತಿದ್ದಾರೆ.
ಅರ್ಧ ಅಡಿಯಿಂದ 5 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ. ₹200 ರಿಂದ ₹7ಸಾವಿರದವರೆಗೆ ಮೂರ್ತಿಗಳ ಬೆಲೆ ನಿಗದಿಪಡಿಸಲಾಗಿದೆ. ಆಗಸ್ಟ್ 27ರಂದು ಗಣೇಶ ಚತುರ್ಥಿಗೆ ಮೂರ್ತಿಗಳು ಬಿರುಸಿನಿಂದ ಮಾರಾಟವಾಗುವ ಸಾಧ್ಯತೆ ಇದೆ’ ಎಂಬ ಮಾತು ಗಣೇಶ ಮೂರ್ತಿ ಅಂಗಡಿ ಪಕ್ಕದ ಟೈಲರ್ ಸಂತೋಷ ಅವರಿಂದ ಕೇಳಿ ಬಂತು.- ಮುತ್ತಾತನ ಕಾಲದಿಂದ ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದೆವು. ತಯಾರಕರು ಹಾಗೂ ಹೊರಗಿನ ವರ್ತಕರು ಬಂದಿದ್ದರಿಂದ ತಂದೆ ಚಿಕ್ಕಪ್ಪನ ಕಾಲಕ್ಕೆ ವ್ಯಾಪಾರ ಕೈಬಿಟ್ಟಿದ್ದೇವೆ. ನಟರಾಜ ಹಳೇಬೀಡು
ಮಣ್ಣಿನ ಗಣೇಶಮೂರ್ತಿ ಮಾರಾಟಕ್ಕೆ ಅಭ್ಯಂತರ ಇಲ್ಲ. ಪಿಒಪಿ ಮೊದಲಾದ ಪರಿಸರಕ್ಕೆ ಹಾನಿಕಾರಕವಾದ ಗಣೇಶ ಮೂರ್ತಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಎಸ್.ಸಿ.ವಿರೂಪಾಕ್ಷ ಹಳೇಬೀಡು ಪಿಡಿಒ
- ಮುತ್ತಾತನ ಕಾಲದಿಂದ ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದೆವು. ತಯಾರಕರು ಹಾಗೂ ಹೊರಗಿನ ವರ್ತಕರು ಬಂದಿದ್ದರಿಂದ ತಂದೆ ಚಿಕ್ಕಪ್ಪನ ಕಾಲಕ್ಕೆ ವ್ಯಾಪಾರ ಕೈಬಿಟ್ಟಿದ್ದೇವೆ.ನಟರಾಜ ಹಳೇಬೀಡು
ಪ್ರತಿವರ್ಷಕ್ಕಿಂತ ಈ ವರ್ಷ ವಿಶಿಷ್ಟವಾದ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿವೆ. ಗಣೇಶ ಮೂರ್ತಿಗಳು ಚೆಂದವನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ.ಶಶಾಂಕ ಹಳೇಬೀಡು ವಿದ್ಯಾರ್ಥಿ
ಪರಿಸರ ಸ್ನೇಹಿ ಮೂರ್ತಿಗಳು ಇತ್ತಿಚೀನ ದಿನದಲ್ಲಿ ಸಾಕಷ್ಟು ಮಂದಿ ಪರಿಸರದ ಕಾಳಜಿ ವ್ಯಕ್ತಪಡಿಸುತ್ತಿದ್ದು ಪರಿಸರಸ್ನೇಹಿ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಬಣ್ಣ ಲೇಪಿಸದ ಮೂರ್ತಿಗಳೂ ಮಾರುಕಟ್ಟೆಯಲ್ಲಿವೆ. ಬಣ್ಣ ಬಳಿಯದ ಚಿಕ್ಕ ಮೂರ್ತಿಗಳನ್ನು ಮಾತ್ರ ಜೋಡಿಸಲಾಗಿದೆ. ಬಣ್ಣ ಇಲ್ಲದ ದೊಡ್ಡ ಮೂರ್ತಿಗಳ ಮಾರಾಟಕ್ಕೆ ವರ್ತಕರು ಕೈಹಾಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.