ADVERTISEMENT

ಹಾಸನ | ಎಸ್‌ಎಸ್‌ಎಲ್‌ಸಿ: ಸರ್ಕಾರಿ ಶಾಲೆಗಳ ಪಾರಮ್ಯ

ಎಂ.ಪಿ.ಹರೀಶ್
Published 4 ಮೇ 2025, 5:50 IST
Last Updated 4 ಮೇ 2025, 5:50 IST
ಎಚ್.ಕೆ. ಪೂಜಾ
ಎಚ್.ಕೆ. ಪೂಜಾ   

ಆಲೂರು: ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಆಲೂರು ತಾಲ್ಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದು, ಗ್ರಾಮೀಣ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿ ಸಾಧನೆಯನ್ನು ಬಿಂಬಿಸಿದೆ.

‘ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವ ತೋರುತ್ತಿದ್ದವರಿಂದ ಫಲಿತಾಂಶ ಉತ್ತರ ನೀಡಿದೆ. ಎರಡು ವರ್ಷದ ಹಿಂದೆ ಐದು, ಕಳೆದ ವರ್ಷ ನಾಲ್ಕನೇ ಸ್ಥಾನದಲ್ಲಿದ್ದ ಫಲಿತಾಂಶ ಈ ವರ್ಷ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ’ ಎನ್ನುತ್ತಾರೆ ಶಾಲಾ ಶಿಕ್ಷಕರು.

ಪ್ರಸಕ್ತ ಸಾಲಿನಲ್ಲಿ ವಿಶೇಷವಾಗಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಸ್ಥಾನ ಪಡೆದಿರುವುದು ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಇಮ್ಮಡಿಗೊಳಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಡ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ಶಿಕ್ಷಕರ ಪರಿಣಾಮಕಾರಿ ಬೋಧನೆ ಇದ್ದಲ್ಲಿ, ಸಾಧನೆ ಮಾಡಬಹುದು ಎನ್ನುವುದನ್ನು ಫಲಿತಾಂಶ ಸಾಬೀತು ಪಡಿಸಿದೆ.

ADVERTISEMENT

‘ತಾಲ್ಲೂಕಿನ 18 ಸರ್ಕಾರಿ ಶಾಲೆಗಳ ಪೈಕಿ ಹಂಪನಕುಪ್ಪೆ, ಹಂಚೂರು ಮತ್ತು ಮಡಬಲು ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿದ್ದರೆ, ಉಳಿದ 15 ಸರ್ಕಾರಿ ಶಾಲೆಗಳು ಸರಾಸರಿ ಶೇ 80 ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿವೆ’ ಎಂದು ಬಿಇಒ ಎ.ಜೆ. ಕೃಷ್ಣೇಗೌಡ ತಿಳಿಸಿದ್ದಾರೆ.

‘ಹತ್ತು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಬಿಆರ್‌ಸಿಯಾಗಿ ಸೇವೆ ಸಲ್ಲಿಸಿದ್ದ ಎ.ಜೆ. ಕೃಷ್ಣೇಗೌಡರು ಸದ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದು, ಶಿಕ್ಷಕರ ಸಾಮರ್ಥ್ಯವನ್ನು ಬಳಸಿಕೊಂಡು ತಾಲ್ಲೂಕಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲು ನೆರವಾಗಿದ್ದಾರೆ’ ಎಂದು ಪ್ರೌಢಶಾಲಾ ಶಿಕ್ಷಕರು ಹೇಳುತ್ತಾರೆ.

ನಿತ್ಯ ವಿಶೇಷ ತರಗತಿ: ‘ವಸತಿ ಶಾಲೆಯಲ್ಲಿ ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಇರುವುದು. ವಸತಿ ಶಾಲೆಯಲ್ಲಿ 24X7 ಟೈಮ್ ಟೇಬಲ್ ಹಾಕಿದ್ದೇವೆ. ಸಂಜೆ 4 ರಿಂದ 8 ಗಂಟೆಯವರೆಗೆ ವಿಶೇಷ ತರಗತಿ ಮತ್ತು ರಾತ್ರಿ 9 ರಿಂದ 10 ರವರೆಗೆ ಪಿಇಟಿ ಮತ್ತು ಸ್ಟಾಫ್‌ ನರ್ಸ್ ನೇತೃತ್ವದಲ್ಲಿ ಓದಿಸುತ್ತೇವೆ’ ಎಂದು ಆಲೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಪ್ರಕಾಶ್‌ ತಿಳಿಸಿದರು.

‘ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಬಳಸುವುದರಿಂದ, ಪರೀಕ್ಷೆ ಕೇಂದ್ರದಲ್ಲಿ ಯಾವುದೇ ಭಯ, ಆತಂಕಕ್ಕೆ ಒಳಗಾಗದಂತೆ ವಿದ್ಯಾರ್ಥಿಗಳನ್ನು ಸಜ್ಜು ಮಾಡುತ್ತೇವೆ. ನಮ್ಮ ಶಾಲೆ ವಿದ್ಯಾರ್ಥಿನಿ ಡಿ.ಯು. ಚರಿತ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆ ವಿಷಯ’ ಎಂದು ಹೇಳಿದರು.

ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಆಲೂರು

ಆಲೂರು: ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ತಾಲ್ಲೂಕಿಗೆ ಶೇ. 88.61 ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಕದಾಳು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎಚ್.ಕೆ. ಪೂಜಾ ಮತ್ತು ಎಂ. ಹೊಸಳ್ಳಿ ಮೊರಾರ್ಜಿ ವಸತಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿ.ಯು. ಚರಿತಾ ಅವರು ತಲಾ 625ಕ್ಕೆ 616 ಅಂಕ ಗಳಿಸಿ ಇಬ್ಬರೂ ಪ್ರಥಮ ಸ್ಥಾನ ಪಡೆದಿದ್ದಾರೆ. 

ತಿಪ್ಪನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎಲ್. ದೀಕ್ಷಿತ್ 614 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಭೈರಾಪುರ ಭೆಥೆಸ್ಥ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಾದ ಎಂ.ಪಿ. ಭುವನ್ ಮತ್ತು ಬಿ.ಎಂ. ಚರಿತಾ ಅವರು ತಲಾ 613 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.

ತಾಲ್ಲೂಕಿನ 18 ಸರ್ಕಾರಿ ಪ್ರೌಢಶಾಲೆಗಳು, 3 ಸರ್ಕಾರಿ ವಸತಿ ಶಾಲೆಗಳು, 4 ಅನುದಾನಿತ ಹಾಗೂ 9 ಅನುದಾನ ರಹಿತ ಶಾಲೆಗಳಿಂದ ಒಟ್ಟು 940 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಸರ್ಕಾರಿ ಪ್ರೌಢಶಾಲೆ ಹಂಪನ ಕುಪ್ಪೆ, ಹಂಚೂರು ಮತ್ತು ಮಡಬಲು, ಕೆ. ಹೊಸಕೋಟೆ ಎಸ್.ಎಸ್.ಕೆ.ಎನ್.ಆರ್. ಹೆಚ್. ಎಸ್. ಅನುದಾನಿತ ಪ್ರೌಢಶಾಲೆ, ಭೈರಾಪುರ ಭೆಥೆಸ್ಥಾ ಪ್ರೌಢಶಾಲೆ, ಚಿಕ್ಕಕಣಗಾಲು ಸೇಂಟ್ ಜೋಸೆಫ್ ಪೃಔಢಶಾಲೆ, ಮಗ್ಗೆ ಇನ್‌ಸ್ಪೈರ್ ಪ್ರೌಢಶಾಲೆ, ಬಿ.ಎಸ್.ಎನ್.ಹೆಚ್ ಪ್ರೌಢಶಾಲೆಗಳು ಶೇ 100 ಫಲಿತಾಂಶ ಪಡೆದಿದೆ.  

ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಮತ್ತು ಕಾರ್ಯ ನಿರ್ವಹಿಸಿದ ಎಲ್ಲರಿಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ ರವರು ಅಭಿನಂದಿಸಿದ್ದಾರೆ.

ಡಿ.ಯು. ಚರಿತಾ
ಎಲ್. ದೀಕ್ಷಿತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.