ಅರಸೀಕೆರೆ: ಇತಿಹಾಸ ಪ್ರಸಿದ್ದ ಮಾಲೇಕಲ್ಲು ತಿರುಪತಿಯಲ್ಲಿ ಭಾನುವಾರ ನಡೆದ ವೆಂಕಟರಮಣ ಸ್ವಾಮಿಯ ತೆಪ್ಪೋತ್ಸವವು ಜನಾಕರ್ಷಣೆಯ ಕೇಂದ್ರವಾಗಿ ಸಹಸ್ರಾರು ಭಕ್ತಾಧಿಗಳು ದೇವರನ್ನು ಕಣ್ತುಂಬಿಕೊಂಡರು.
ಜಾತ್ರ ಮಹೋತ್ಸವದ ನಂತರದ ದಿನಗಳಲ್ಲಿ ಪ್ರತಿವರ್ಷವು ತೆಪ್ಪೋತ್ಸವು ನಡೆಯಲಿದ್ದು ಈ ವರ್ಷವೂ ಭಾನುವಾರ ರಾತ್ರಿ ಲಕ್ಷ್ಮೀ ವೆಂಕಟರಮಣ ಸ್ವಾಮಿ ಶ್ರೀದೇವಿ ಭೊದೇವಿ ಸಮೇತರಾಗಿ ದೇವಸ್ಥಾನದ ಪುಷ್ಕರಣಿ ಯಲ್ಲಿ ಉತ್ಸವ ಮೂರ್ತಿಯನ್ನು ಅಲಂಕೃತ ತೆಪ್ಪದ ಮೇಲೆ ಕುಳ್ಳಿರಿಸಿ ಪೂಜಾ ಕೈಂಕರ್ಯಗಳೊಂದಿಗೆ ವಿಶೇಷ ಉತ್ಸವವು ಸಡಗರದಿಂದ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮವು ನಗರದ ಅರಸೀಕೆರೆ ಪೋಲಿಸ್ ಇಲಾಖೆ ವತಿಯಿಂದ ಪ್ರತಿವರ್ಷವು ನಡೆಯುತ್ತಿದೆ. ಜಲವಿಹಾರದ ವೈಭವವನ್ನು ಸಾವಿರಾರು ಭಕ್ತಾಧಿಗಳು ಸಂತಸದಿಂದ ವೀಕ್ಷಿಸಿ ದೇವರನ್ನು ಪಾರ್ಥಿಸಿದರು. ತೆಪ್ಪೋತ್ಸವದ ಅಂಗವಾಗಿ ಪುಷ್ಕರಣಿಯಲ್ಲಿ ಶುಚಿತ್ವ ಕಾಪಾಡುವುದರ ಜೊತೆಗೆ ಸರಳ ದೀಪಾಲಂಕಾರ ಮಾಡಲಾಗಿತ್ತು.
ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಮಾತನಾಡಿ, ‘ರಾಜ್ಯದಲ್ಲಿ ಮನೆ ಮಾತಾಗಿರುವ ತಿರುಪತಿಯ ವೆಂಕಟರಮಣ ಸ್ವಾಮಿಗೆ ಅಪಾರ ಭಕ್ತ ವೃಂದ ಇದ್ದು ಎಲ್ಲರನ್ನೂ ಆಶೀರ್ವದಿಸಲಿ. ಧರ್ಮ ಮತ್ತು ಸಂಸ್ಕ್ರತಿಯಿಂದ ಮನುಷ್ಯನ ಜೀವನ ಸುಖಮಯವಾಗಿರುತ್ತದೆ’ ಎಂದು ಹೇಳಿದರು.
ಅರಸೀಕೆರೆ ಡಿ,ವೈಎಸ್ಪಿ ಗೋಪಿನಾಯ್ಕ್, ವೃತ ನಿರೀಕ್ಷಕ ರಾಘವೇಂದ್ರ, ಪ್ರದೀಪ್ ನಾಯ್ಕ್ ಹಾಗೂ ಹಿರಿಯ ಮತ್ತು ಕಿರಿಯ ಪೋಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ತೆಪ್ಪೋತ್ಸವ ನಂತರ ಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.