ADVERTISEMENT

ಹಾಸನ: ಕೌಶಲ ಕರ್ನಾಟಕ ಅನುಷ್ಠಾನವಾಗಲಿ- ರೋಹಿಣಿ ಸಿಂಧೂರಿ ಸೂಚನೆ

ಪ್ರಚಾರ ನಡೆಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 12:45 IST
Last Updated 7 ಸೆಪ್ಟೆಂಬರ್ 2018, 12:45 IST
ಹಾಸನದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸಭೆ ನಡೆಸಿದರು
ಹಾಸನದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳ ಸಭೆ ನಡೆಸಿದರು   

ಹಾಸನ: ಯುವ ಸಮುದಾಯದ ಆಶಾಕಿರಣವಾಗಿರುವ ಕೌಶಲ ಕರ್ನಾಟಕ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು ಹಾಗೂ ಈ ಬಗ್ಗೆ ವ್ಯಾಪಕ ಪ್ರಚಾರ ಕಾರ್ಯಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಶುಕ್ರವಾರ ನಡೆದ ಜಿಲ್ಲಾಮಟ್ಟದ ಸಮಿತಿಯ ಪ್ರಥಮ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವೃತ್ತಿ ಕೌಶಲ ತರಬೇತಿ ಹಾಗೂ ಉದ್ಯೋಗಾವಕಾಶ ಸೃಷ್ಟಿಸಿ ಹಲವು ಯೋಜನೆಗಳನ್ನು ರೂಪಿಸಿದ್ದು, ಅದು ಸರಿಯಾಗಿ ನಿರುದ್ಯೋಗಿಗಳಿಗೆ ತಲುಪುವಂತಾಗಬೇಕು ಎಂದರು.

ADVERTISEMENT

ಈ ಯೋಜನೆಯಲ್ಲಿ 400ಕ್ಕೂ ಅಧಿಕ ಕೌಶಲಗಳ ಕುರಿತು ತರಬೇತಿ ಹಾಗೂ ಉದ್ಯೋಗ ಕಲ್ಪಿಸಲು ಅವಕಾಶ ಇದೆ. ಇದೊಂದು ನಿರಂತರ ಪ್ರಕ್ರಿಯೆ ಜಿಲ್ಲೆಯ ಎಲ್ಲ ನಿರುದ್ಯೋಗಿಗಳು ಹಾಗೂ ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಲು ಬಯಸುವವರು ನೋಂದಣಿ ಮಾಡಿಕೊಂಡು ಬದುಕನ್ನು ಉತ್ತಮಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಹೆಚ್ಚು ಉದ್ಯೋಗ ತರಬೇತುದಾರರನ್ನು ಗುರುತಿಸಿ ನೋಂದಾಯಿತ ಅನಕ್ಷರಸ್ಥರಿಗೂ ಗಾರೆ, ಮರಗೆಲಸ, ಗ್ರಾನೈಟ್, ಪುಷ್ಪಾಲಂಕಾರ, ಮನೆ ನಿರ್ವಹಣೆ, ಆಹಾರ ತಯಾರಿಕಾ ಕ್ಷೇತ್ರಗಳಲ್ಲಿ ತರಬೇತಿ ನೀಡುವುದು ಸೂಕ್ತ ಎಂದು ತಿಳಿಸಿದರು.

ನಗರದ ಕೈಗಾರಿಕಾ ಬಡಾವಣೆಯ 250 ಎಕರೆ ವಿಶೇಷ ಆರ್ಥಿಕ ವಲಯದಲ್ಲಿ ಜಾಗ ಲಭ್ಯವಿದೆ. ಅಲ್ಲಿ ಶೌಚ ಸಾಮಗ್ರಿ ಉದ್ಯಮಗಳಿಗೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ. ಅಂತಹ ಉದ್ಯಮಿಗಳನ್ನು ಪ್ರೋತ್ಸಾಹಿಸಿ ಸ್ಥಳೀಯರಿಗೆ ತರಬೇತಿ ನೀಡಿ ಹೆಚ್ಚಿನ ಯುವಕರಿಗೆ ಉದ್ಯೋಗ ಕಲ್ಪಿಸಬಹುದಾಗಿದ್ದು ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ. ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಗ್ರಾನೈಟ್, ಇಂಟರ್ ಲಾಕಿಂಗ್ ಕ್ಷೇತ್ರದಲ್ಲಿ ಸಂಪೂರ್ಣ ಹೊರರಾಜ್ಯದ ಕೆಲಸಗಾರರು ಆವರಿಸಿದ್ದಾರೆ. ಸ್ಥಳೀಯರಿಗೆ ಉತ್ತಮ ತರಬೇತಿ ನೀಡಿದರೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಬಹುದಾಗಿದೆ. ಕೇಂದ್ರ ಸರ್ಕಾರದ ದೀನದಯಾಳ್ ಕೌಶಲಾಭಿವೃದ್ಧಿ ಯೋಜನೆಯಡಿಯೂ ನೋಂದಣಿ ಹಾಗೂ ತರಬೇತಿ ನೀಡಲಾಗುತ್ತಿದೆ. ಯುವ ಸಮುದಾಯ ಈ ಸೌಲಭ್ಯ ಪಡೆಯಬೇಕು ಎಂದರು.

ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ವಿಜಯಲಕ್ಷ್ಮಿ, ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 25,518ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. 71 ಉದ್ಯೋಗ ತರಬೇತಿ ಸಂಸ್ಥೆಗಳು ಹೆಸರು ನೋಂದಾಯಿಸಿವೆ. ಶೀಘ್ರದಲ್ಲೇ ತರಬೇತಿ ಚಟುವಟಿಕೆ ಪ್ರಾರಂಭಿಸಲಾಗುವುದು. ಈ ಸಂಸ್ಥೆಗಳು ತರಬೇತಿ ಜೊತೆಗೆ ಶೇ 70ರಷ್ಟು ಮಂದಿಗೆ ವೃತ್ತಿ ನಿಯೋಜನೆ ಒದಗಿಸಬೇಕಾಗಿದೆ. ಕೌಶಲಾಭಿವೃದ್ಧಿ ವೆಬ್‌ಸೈಟ್ ವಿಳಾಸ www.kaushalkar.com ನೋಡಬಹುದು ಎಂದು ತಿಳಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರಿಟೇಲ್ ಅಸೋಸಿಯೆಷನ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.