ADVERTISEMENT

ಅಪ್ರಬುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ: ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 5:03 IST
Last Updated 10 ಏಪ್ರಿಲ್ 2022, 5:03 IST
ಅರಸೀಕೆರೆ ನಗರದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಎಚ್.ಸಿ.ಮಹದೇವಪ್ಪ ಮಾಲಾರ್ಪಣೆ ಮಾಡಿದರು. ಬಿ.ಶಿವರಾಮ್, ಪಟೇಲ್ ಶಿವಪ್ಪ, ಚಂದ್ರಶೇಖರ್ ಗಂಜಿಗೆರೆ ಇದ್ದರು
ಅರಸೀಕೆರೆ ನಗರದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಎಚ್.ಸಿ.ಮಹದೇವಪ್ಪ ಮಾಲಾರ್ಪಣೆ ಮಾಡಿದರು. ಬಿ.ಶಿವರಾಮ್, ಪಟೇಲ್ ಶಿವಪ್ಪ, ಚಂದ್ರಶೇಖರ್ ಗಂಜಿಗೆರೆ ಇದ್ದರು   

ಅರಸೀಕೆರೆ: ‘ಆರಗ ಜ್ಞಾನೇಂದ್ರ ಕೋಮುವಾದವನ್ನು ಪ್ರಚೋದಿಸು ವಂತಹ ಹೇಳಿಕೆ ನೀಡುವ ಮೂಲಕ ಅಪ್ರಬುದ್ಧ ಗೃಹ ಸಚಿವ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಎಚ್.ಸಿ.ಮಹದೇವಪ್ಪ ದೂರಿದರು.

ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗೂ ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಬಿಜೆಪಿ ಸರ್ಕಾರವು ತನ್ನ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಕೋಮುವಾದ ಹಾಗೂ ಹಿಂದಿ ಭಾಷೆ ಹೇರಿಕೆಯಲ್ಲಿ ತೊಡಗಿದೆ. ಹಿಜಾಬ್, ಹಲಾಲ್, ಆಜಾನ್, ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧದಂತಹ ಅನೇಕ ವಿವಾದಗಳನ್ನು ಸೃಷ್ಟಿಸುವ ಮೂಲಕ ಕೋಮ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಇದರಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು’ ಎಂದರು.

ADVERTISEMENT

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಜನರು ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದರು.

‘ಅರಸೀಕೆರೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವವರಿಗೆ ಸ್ವಾಗತವಿದೆ’ ಎಂದರು.

ಮಾಜಿ ಸಚಿವ ಬಿ.ಶಿವರಾಮ್, ಮುಖಂಡರಾದ ಪಟೇಲ್ ಶಿವಪ್ಪ, ಚಂದ್ರಶೇಖರ್ ಗಂಜಿಗೆರೆ, ದಿನೇಶ್, ರಂಗನಾಥ್ ಮಾಡಾಳು, ನಗರಸಭೆ ಸದಸ್ಯ ವೆಂಕಟಮುನಿ, ವೆಂಕಟೇಶ್ ಸುಭಾಷ್ ನಗರ, ಚಂದ್ರಯ್ಯ ಮಾಡಾಳು, ಮಂಜುನಾಥ್, ಗೋಪಿ, ರೋಷನ್ ಇದ್ದರು.

***

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.

-ಎಚ್.ಸಿ.ಮಹದೇವಪ್ಪ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.