ಬೇಲೂರು: ಪಟ್ಟಣ ಸಮೀಪದ ಬಂಟೇನಹಳ್ಳಿ ಎಚ್.ಪಿ. ಗ್ಯಾಸ್ ಏಜೆನ್ಸಿ ಬಳಿ ಇ-ಕೆ ವೈಸಿ ಮಾಡಿಸಲು ಗ್ರಾಹಕರು ಗುರುವಾರ ಮುಗಿಬಿದ್ದಿದ್ದರು.
ಗ್ಯಾಸ್ ಕಂಪನಿಯಿಂದ ವಿವಿಧ ಸೌಲಭ್ಯ ಪಡೆಯಲು ಡಿ.31 ರೊಳಗೆ ಇ-ಕೆವೈಸಿ ಮಾಡಿಸಬೇಕೆಂಬ ವದಂತಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದರಿಂದ, ಸಾವಿರಾರು ಗ್ರಾಹಕರು ಬೆಳಗಿನಿಂದಲೇ ಆಧಾರ್ ಕಾರ್ಡ್, ಗ್ಯಾಸ್ ಪಾಸ್ ಪುಸ್ತಕ ಹಿಡಿದು ಶ್ರೀಚನ್ನಕೇಶವ ಗ್ಯಾಸ್ ಏಜೆನ್ಸಿ ಕಚೇರಿ ಮುಂದೆ ಜಮಾಯಿಸಿದರು. ದಿನವೊಂದಕ್ಕೆ 125 ಜನ ಗ್ರಾಹಕರಿಗೆ ಮಾತ್ರ ಇ-ಕೆ ವೈಸಿ ಮಾಡಲು ಸಾಧ್ಯವೆಂದು ಏಜೆನ್ಸಿಯವರು ಎಷ್ಟೇ ಹೆಳಿದರೂ ಜನರು ಕೆಳುವ ಸ್ಥಿತಿಯಲ್ಲಿರಲಿಲ್ಲ.
ಗ್ರಾಹಕ ವಿಶ್ವನಾಥ್ ಮಾತನಾಡಿ, ಆಧಾರ್ ಲಿಂಕ್ ಮಾಡಿಸಬೇಕೆಂದು ಅಕ್ಕ ಪಕ್ಕದವರಿಂದ ಕೇಳಿ ತಿಳಿದಿಕೊಂಡೆ. ಲಿಂಕ್ ಮಾಡಿಸದಿದ್ದರೆ ಸರ್ಕಾರದಿಂದ ದೊರಕುವ ಸೌಲಭ್ಯ ನಿಂತು ಹೋಗಬಹುದೆಂಬ ಭಯದಿಂದ ಬೆಳಗ್ಗೆಯೇ ಬಂದು ನೂರಾರು ಜನರ ಜತೆ ಸರತಿ ಸಾಲಿನಲ್ಲಿ ನಿಂತಿದ್ದೇನೆ ಎಂದರು.
ಶ್ರೀಚನ್ನಕೇಶವ ಗ್ಯಾಸ್ ಎಜೆನ್ಸಿ ಮಾಲೀಕರಾದ ಲತಾ ಮಂಜೇಶ್ವರಿ ಮಾತನಾಡಿ, ಎಚ್ಪಿ ಗ್ಯಾಸ್ ಕಂಪನಿಯ ಕೇಂದ್ರ ಕಚೇರಿಯಿಂದ ಇ-ಕೆವೈಸಿ ಮಾಡಿಸುವಂತೆ ತಿಂಗಳ ಹಿಂದೆಯೆ ಸೂಚನೆ ಬಂದಿದೆ. ಆದರೆ ಕೊನೆಯ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ಗೊಂದಲಕ್ಕೊಳಗಾಗದೆ ಸಮಧಾನದಿಂದ ಆಧಾರ್ ಕಾರ್ಡ್ ಹಾಗೂ ಗ್ಯಾಸ್ ಪುಸ್ತಕದ ಜತೆ ಕಚೇರಿಗೆ ಆಗಮಿಸಿ ಇ–ಕೆವೈಸಿ ಮಾಡಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.
ಶ್ರೀಚನ್ನಕೆಶವ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ಕೇಂದ್ರದ ಉಜ್ವಲ ಉಚಿತ ಗ್ಯಾಸ್ ನೋಂದಣಿಗೆ 2024ರ ಫೆಬ್ರುವರಿ ಕೊನೆಯ ದಿನವಾಗಿದೆ. ಅದಕ್ಕೆ ಬೇಕಾಗುವ ದಾಖಲೆಗಳನ್ನು ಕಚೇರಿಯ ಮುಂಭಾಗ ಪ್ರಕಟಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.