ಹೊಳೆನರಸೀಪುರ: ‘ಕಾಲೇಜು ದಿನಗಳಲ್ಲಿ ಪ್ರೌಢಾವಸ್ಥೆಯ ಸಹಜ ಆಕರ್ಷಣೆಗೆ ಒಳಗಾಗಿ ನಿಮ್ಮ ಮುಂದಿನ ಜೀವನ ಹಾಳು ಮಾಡಿಕೊಳ್ಳಬೇಡಿ. ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ವಿದ್ಯೆ ಕಲಿತು ಸಾಧನೆ ಮಾಡಿ’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಸಲಹೆ ನೀಡಿದರು.
ಸರ್ಕಾರಿ ಗೃಹ ವಿಜ್ಞಾನ ಮಹಿಳಾ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ತಾಲ್ಲೂಕು ಘಟಕ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಪ್ರಾಪ್ತ ವಯಸ್ಸಿನಲ್ಲಿ ಆಗುವ ಮದುವೆ ಹಾಗೂ ನಿಶ್ಚಿತಾರ್ಥ ಮಾಡುವುದು ಕಾನೂನು ಅಪರಾಧ. ಇಂತಹ ಪ್ರಕರಣಗಳು ನಡೆದಾಗ ಪೋಕ್ಸೊ ಕಾಯ್ದೆ ಅಡಿಯಲ್ಲಿ ಶಿಕ್ಷೆಗೆ ಒಳಗಾಗುವ ಅಪಾಯ ಇರುತ್ತದೆ. ಯಾರೂ ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ಹಾಗೂ ಸಹಕಾರ ನೀಡಬಾರದು ಎಂದರು.
ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ, ‘ಪೋಷಕರು ನಿಮ್ಮ ಮೇಲೆ ನಂಬಿಕೆ ಇಟ್ಟು, ನಿಮಗೊಂದು ಉತ್ತಮ ಜೀವನ ರೂಪಿಸಲು ಅವರಿಗೆ ಎಷ್ಟೇ ಕಷ್ಟ ಇದ್ದರೂ ನಿಮ್ಮನ್ನು ಕಾಲೇಜಿಗೆ ಕಳುಹಿಸುತ್ತಾರೆ. ನೀವು ಅವರ ನಂಬಿಕೆಯನ್ನು ಸುಳ್ಳು ಮಾಡಿದರೆ ನಿಮ್ಮ ಬದುಕು ಕಷ್ಟವಾಗುತ್ತದೆ. ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ’ ಎಂದು ಸಲಹೆ ನೀಡಿದರು.
ವಕೀಲ ಎಚ್.ಕೆ. ಹರೀಶ್ ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವಿ.ಶಿವಕುಮಾರ್, ವಕೀಲರಾದ ಬಿಂದೇಶ್ವರಿ ಮಾತನಾಡಿದರು.
ಚಂದ್ರಮ್ಮ, ಎಚ್.ಕೆ. ಅಶೋಕ್, ಫಕೀರಮ್ಮ ಮುರುಗೊಡ್, ಶ್ವೇತಾ ನಾಯಕ್, ಜಯಚಂದ್ರ, ಸಹ ಪ್ರಾಧ್ಯಾಪಕರಾದ ಸುನೀಲ್, ಜಗದೀಶ್, ನಾಗೇಂದ್ರ, ಉಮೇಶ್, ರಾಘವೇಂದ್ರ ಭಾಗವಹಿಸಿದ್ದರು.
ಪ್ರಾಧ್ಯಾಪಕ ಕೃಷ್ಣಮೂರ್ತಿ ನಿರೂಪಿಸಿದರು. ಗಣೇಶ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.