ADVERTISEMENT

ಇಬ್ಬರ ಮೃತದೇಹ ಪತ್ತೆ

ಮತ್ತೊಬನ ಶವಕ್ಕಾಗಿ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 13:15 IST
Last Updated 10 ಅಕ್ಟೋಬರ್ 2019, 13:15 IST

ಹಾಸನ: ಆಲೂರು ಬಳಿಯ ಯಗಚಿ ನದಿಯಲ್ಲಿ ಮಂಗಳವಾರ ನೀರು ಪಾಲಾಗಿದ್ದ ಮೂವರು ಯುವಕರ ಪೈಕಿ ಗುರುವಾರ ಇಬ್ಬರ ಮೃತದೇಹ ಪತ್ತೆಯಾಗಿದೆ.

ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ರತನ್ ಮತ್ತು ದೊಡ್ಡ ಕಣಕಾಲು ಗ್ರಾಮದ ಭೀಮ್ ರಾಜ್ ಎಂಬುವರ ಶವಗಳನ್ನು ಎನ್ ಡಿ ಆರ್ ಎಫ್ ತಂಡ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ.

ಮತ್ತೊಬ್ಬ ಯುವಕ ಮನು ಮೃತದೇಹ ಹುಡುಕಾಟಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ನಡುವೆ ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ₹ 1 ಲಕ್ಷ ಪರಿಹಾರ ಘೋಷಣೆ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯ ಸರ್ಕಾರ ತಲಾ ₹ 5 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ.

ಮಂಗಳೂರಿನಿಂದ ಬಂದ ಎನ್ ಡಿ ಆರ್ ಎಫ್ ತಂಡ ಬೆಳಗ್ಗೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಮೊದಲು ರತನ್ ಶವ ಸಿಕ್ಕಿತ್ತು. ಅದಾದ ಕೆಲ ಹೊತ್ತಿನಲ್ಲಿ ಭೀಮ್ ರಾಜ್ ಮೃತದೇಹವೂ ಪತ್ತೆಯಾಯಿತು.

ADVERTISEMENT

ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ಕುಟುಂಬ ಸದಸ್ಯರ ದುಃಖ ಮೃತದೇಹಗಳನ್ನು ನೋಡುತ್ತಿದ್ದಂತೆಯೇ ಕಟ್ಟೆಯೊಡೆಯಿತು. ಹೆತ್ತವರು ಹಾಗೂ ಸಂಬಂಧಿಕರ ಆಕ್ರಂದನ ನೆರೆದಿದ್ದ ನೂರಾರು ಮಂದಿಯನ್ನು ಸ್ಮಶಾನ ಮೌನದಲ್ಲಿ ಮುಳುಗಿಸಿತ್ತು. ನಂತರ ರತನ್ ಅಂತ್ಯಕ್ರಿಯೆಯನ್ನು ಯಗಚಿ ನದಿಯ ದಡದಲ್ಲೇ ನೆರವೇರಿಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.