
ಸಕಲೇಶಪುರ: ಕಾಡಾನೆಯೊಂದು ತಾಲ್ಲೂಕಿನ ಕಾಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ತಿಂಗಳಿಂದ ಅಡ್ಡಾಡುತ್ತಾ ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿದೆ.
ಸೋಮವಾರ ರಾತ್ರಿ ಕಾಮಹಳ್ಳಿ ವಿಶ್ವನಾಥ್ ಅವರ ಅಡಿಕೆ ತೋಟಕ್ಕೆ ನುಗ್ಗಿ ಸುಮಾರು 30ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಬುಡ ಸಮೇತ ಮುರಿದು ಹಾಕಿದೆ. ಕಾಫಿ ಗಿಡಗಳನ್ನೂ ಸಹ ನಾಶ ಮಾಡಿದ್ದು, ಪಂಪ್ ಹೌಸ್ನ ಶೆಡ್ ಹಾಗೂ ಚಾವಣಿಯ ಶೀಟ್ಗಳನ್ನು ಪುಡಿ ಮಾಡಿ ಲಕ್ಷಾಂತರ ರೂಪಾಯಿ ಹಾನಿ ಮಾಡಿದೆ ಎಂದು ರೈತ ವಿಶ್ವನಾಥ್ ಅಳಲು ತೋಡಿಕೊಂಡರು.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟಕ್ಕೆ ವೈಜ್ಞಾನಿಕ ದರದಲ್ಲಿ ಪರಿಹಾರ ನೀಡಬೇಕು. ಇಲ್ಲದೇ ಹೋದರೆ ನಮ್ಮ ಬದುಕು ತುಂಬಾ ಕಷ್ಟವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದೇ ಒಂಟಿ ಸಲಗ ಸುಳ್ಳಕ್ಕಿ, ಶಾಂತಪುರ, ಅರೇಕೆರೆ, ಕುದುರಂಗಿ, ಇಬ್ಬಡಿ, ನಡಹಳ್ಳಿ, ಬ್ಯಾಕರವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿಯೇ ಅಡ್ಡಾಡಿಕೊಂಡು ಬೆಳೆ, ತೋಟದ ಬೇಲಿ, ಕೆರೆ ದಿಬ್ಬಗಳನ್ನು ಹಾಳು ಮಾಡುತ್ತಿದೆ ಎಂದು ರೈತರು ಸಮಸ್ಯೆ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.