ADVERTISEMENT

ಕೊರೊನಾ: ಜಿಲ್ಲಾದಾದ್ಯಂತ ಪ್ರತ್ಯೇಕ ವಾರ್ಡ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 10:19 IST
Last Updated 4 ಫೆಬ್ರುವರಿ 2020, 10:19 IST

ಹಾಸನ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲಾಸ್ಪತ್ರೆ, ತಾಲ್ಲೂಕು ಮಟ್ಟದ ಸಾರ್ವಜನಿಕರ ಅಸ್ಪತ್ರೆಗಳಲ್ಲಿ ಪ್ರತ್ಯೇಕವಾದ ವಾರ್ಡ್ ಮೀಸಲಿರಿಸಲಾಗಿದೆ.

ತೀವ್ರ ಜ್ವರ, ನೆಗಡಿ, ಕೆಮ್ಮು ಹಾಗೂ ಉಸಿರಾಟದ ತೊಂದರೆ ರೋಗದ ಲಕ್ಷಣಗಳಾಗಿವೆ. ಚೀನಾದ ವುಹಾನ್ ನಗರಕ್ಕೆ ಹೋಗಿದ್ದರೆ ಅಥವಾ ರೋಗ ಲಕ್ಷಣಗಳಿದ್ದರೆ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಈ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಒಂದು ತ್ವರಿತ ಪ್ರತಿಕ್ರಿಯಾ ತಂಡವು ಜಿಲ್ಲಾ ಸರ್ವೇಕ್ಷಣಾ ಆಧಿಕಾರಿ ಡಾ. ಹಿರಿಣ್ಣಯ್ಯ ನೇತೃತ್ವದಲ್ಲಿ ರಚನೆಯಾಗಿದೆ. ಮಾಹಿತಿಗೆ ದೂ.08172-245115 ಹಾಗೂ ಸಹಾಯವಾಣಿ ಸಂಖ್ಯೆ: 104 ಗೆ ಸಂಪರ್ಕಿಸಬಹುದು.

ADVERTISEMENT

ಮುನ್ನೆಚ್ಚರಿಕಾ ಕ್ರಮಗಳು

ಕೆಮ್ಮುವಾಗ ಹಾಗೂ ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ಕೈಯನ್ನು ಚೆನ್ನಾಗಿ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯ ಅಭ್ಯಾಸ ಮಾಡಿಕೊಳ್ಳಬೇಕು ಹಾಗೂ ಮಾಸ್ಕ್‌ಗಳನ್ನು ಧರಿಸಬೇಕು.

ಅನಾರೋಗ್ಯದಿಂದ ಅಥವಾ ಕೆಮ್ಮು ಮತ್ತು ನೆಗಡಿ ಲಕ್ಷಣ ಹೊಂದಿರುವ ಜನಗಳೊಂದಿಗೆ ನಿಕಟ ಸಂಪರ್ಕ ಹೊಂದಬೇಡಿ. ಪ್ರಾಣಿಗಳ ನೇರ ಸಂಪರ್ಕ ಹಾಗೂ ಬೇಯಿಸದ ಮಾಂಸ ಸೇವನೆ ಮಾಡಬಾರದು. ಪ್ರಾಣಿಗಳ ಸಾಕಾಣಿಕಾ ಕೇಂದ್ರಗಳು, ಮಾರಾಟ ಕೇಂದ್ರಗಳು ಅಥವಾ ಪ್ರಾಣಿಗಳ ಹತ್ಯೆ ಸ್ಥಳಗಳಿಗೆ ಹೋಗಬಾರದು. ವಿಮಾನ ನಿಲ್ದಾಣದ ವೈದ್ಯಾಧಿಕಾರಿಗಳ ಸೂಚನೆ ಪಾಲಿಸಬೇಕು.

ಈ ರೋಗಕ್ಕೆ ಲಸಿಕೆ ಇಲ್ಲ, ಲಕ್ಷಣಾಧಾರಿತ ಚಿಕೆತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.