ಹಾಸನ: ‘ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹಾಗೂ ಅವರ ತಂಡ ಮಾಡಿರುವ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲು ಸಿದ್ದ’ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದಅಭ್ಯರ್ಥಿ ಗಂಜಲಗೂಡು ಗೋಪಾಲಗೌಡ ಸವಾಲು ಹಾಕಿದರು.
‘ಮಂಜೇಗೌಡರ ತಂಡಕ್ಕೆ ಈ ಬಾರಿ ಅಧಿಕಾರ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಎಲ್ಲೋ ಕುಳಿತು ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಸಮೇತ ಬಹಿರಂಗ ಚರ್ಚೆಗೆ
ಬರಲಿ. ಮಂಜೇಗೌಡರು ತಮ್ಮ ಅಭ್ಯರ್ಥಿ ಪರ ನಡೆಸುವ ಸಭೆ, ಸಮಾರಂಭಗಳಲ್ಲಿ ನನ್ನ ವಿರುದ್ಧ ಸುಳ್ಳು
ಆರೋಪ ಮಾಡಿರುವಆಡಿಯೊ ಹಾಗೂ ವಿಡಿಯೋಇವೆ’ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಜಿಲ್ಲಾ ಸಮ್ಮೇಳನಕ್ಕೆ ₹5 ಲಕ್ಷ, ₹1 ಲಕ್ಷ ವಾರ್ಷಿಕ ವೆಚ್ಚ, ತಾಲ್ಲೂಕು ಸಮ್ಮೇಳನಕ್ಕೆ ₹ 1 ಲಕ್ಷ, ವಾರ್ಷಿಕ
ವೆಚ್ಚ ₹25 ಸಾವಿರ ಅನುದಾನ ಬರುತ್ತದೆ. ಆದರೆ ಮಂಜೇಗೌಡ ಬೆಂಬಲಿತ ಅಭ್ಯರ್ಥಿ ಜಿಲ್ಲಾ ಸಮ್ಮೇಳನಕ್ಕೆ
₹4.30 ಲಕ್ಷ, ತಾಲ್ಲೂಕು ಸಮ್ಮೇಳನಕ್ಕೆ ₹60 ಸಾವಿರ ಬರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ
ಪರಿಷತ್ ಬೈಲಾ ಗೊತ್ತಿಲ್ಲ’ ಎಂದು ತಿಳಿಸಿದರು.
‘ಸಾಹಿತ್ಯ ಸಮ್ಮೇಳನಗಳಿಗೆ ಯಾರಿಂದಲೂ ಹಣ ಸಂಗ್ರಹ ಮಾಡಿಲ್ಲ ಎಂದು ಸುಳ್ಳು ಹೇಳುತ್ತಾರೆ. ಪರಿಷತ್ ಭವನದ ಎದುರಿನ ವಾಣಿಜ್ಯ ಮಳಿಗೆಗಳನ್ನು ಯಾವ ಮಾನದಂಡದ ಮೇಲೆ ಬಾಡಿಗೆ ನೀಡಲಾಗಿದೆ ಎಂಬುದನ್ನು ತಿಳಿಸಬೇಕು. ಅನಿಲ್ ಕುಮಾರ್ ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ₹ 10 ಲಕ್ಷ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ವಿದ್ಯಾರ್ಥಿಗಳಿಗೆ ಸ್ಟ್ಯಾಂಪ್ ಅನ್ನು ₹ 10ಕ್ಕೆ ಮಾರಾಟ ಮಾಡಿ ಹಣ ಸಂಗ್ರಹ ಮಾಡಲಾಗಿದೆ. ಸಾರ್ವಜನಿಕರಿಂದ, ಅಧಿಕಾರಿಗಳಿಂದ ಪಡೆದಿರುವ ಹಣದ ಬಗ್ಗೆ ಮಾಹಿತಿ ನೀಡಲು ಏಕೆ ಹಿಂಜರಿಯುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಕಲಾವಿದ ಯಲಗುಂದ ಶಾಂತಕುಮಾರ್, ಕರಡಿಗಾಲ ಅರುಣ್ ಗೌಡ, ಸಾಮಾಜಿಕ
ಕಾರ್ಯಕರ್ತ ರವಿಕಿರಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.