ADVERTISEMENT

ಸಂವಿಧಾನ ರಚನೆ: ವಕೀಲರ ಪಾತ್ರ ಮಹತ್ತರ

ವಕೀಲರ ದಿನಾಚರಣೆ ಉದ್ಘಾಟಿಸಿದ ನ್ಯಾ. ಎಚ್‌.ಪಿ. ಸಂದೇಶ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:39 IST
Last Updated 3 ಡಿಸೆಂಬರ್ 2022, 14:39 IST
ಹಾಸನದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ವಕೀಲರ ದಿನಾಚರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್‌ ಉದ್ಘಾಟಿಸಿದರು.
ಹಾಸನದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ವಕೀಲರ ದಿನಾಚರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್‌ ಉದ್ಘಾಟಿಸಿದರು.   

ಹಾಸನ: ‘ಸ್ವಾತಂತ್ರ್ಯ ಪೂರ್ವದಿಂದಲೂ ವಕೀಲರು ತಮ್ಮ ವೃತ್ತಿಪರತೆ ಮೆರೆದಿದ್ದು, ದೇಶ ಸ್ವಾತಂತ್ರ್ಯ ಪಡೆಯವ ಸಂದರ್ಭದಲ್ಲಿ ತಮ್ಮ ವೃತ್ತಿ ತ್ಯಜಿಸಿ ಹೋರಾಟದಲ್ಲಿ ಧುಮುಕಿದ ಹಲವು ಉದಾಹರಣೆಗಳಿವೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷ್ ಆಡಳಿತದಿಂದ ದೇಶ ಸ್ವಾತಂತ್ರ್ಯ ಪಡೆಯಲು ಹಾಗೂ ಸಂವಿಧಾನ ರಚನೆಯಲ್ಲಿ ವಕೀಲರ ಪಾತ್ರ ಮಹತ್ವವಾದದ್ದು ಎಂದರು.

ವಿಶ್ವದಲ್ಲಿಯೇ ಶ್ರೇಷ್ಠವಾದ ಭಾರತೀಯ ಸಂವಿಧಾನ ರಚನೆಯಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ಸಂವಿಧಾನ ರಚನೆಗೆ ೨ ವರ್ಷ 11 ತಿಂಗಳು 18 ದಿನ ತಗುಲಿತು. ಈ ಸಂವಿಧಾನ ರಚನಾ ಕರಡು ಸಮಿತಿಯಲ್ಲಿ 389 ಸದಸ್ಯರಲ್ಲಿ ಬಹುತೇಕ ಮಂದಿ ವಕೀಲರಾಗಿದ್ದರು ಎಂಬುದು ಹೆಮ್ಮೆಪಡುವ ವಿಷಯ ಎಂದರು.

ADVERTISEMENT

ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ವಕೀಲರಾಗಿದ್ದರು. ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಸಹ ವಕೀಲ ವೃತ್ತಿ ಮಾಡುವ ಮೂಲಕ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಮಾತನಾಡಿ, ವಕೀಲರು ತಮ್ಮ ವೃತ್ತಿ ಜೀವನವನ್ನು ನಿಸ್ಪಕ್ಷಪಾತವಾಗಿ ನಿರ್ವಹಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಕೆಲವು ವಕೀಲರಲ್ಲಿ ವೃತ್ತಿಪರತೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಕೀಲರು ಉತ್ತಮ ಸಮಾಜ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದು, ಸಮಾಜದ ಶೋಷಿತರ, ದಮನಿತ ಜನರಿಗೆ ನ್ಯಾಯ ಒದಗಿಸುವ ಮೂಲಕ ಅವರ ಬೆಂಬಲವಾಗಿ ನಿಲ್ಲುವ ಅವಶ್ಯಕತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಜಿ ಪೂರ್ಣಚಂದ್ರ ತೇಜಸ್ವಿ ಪ್ರಾಸ್ತವಿಕವಾಗಿ ಮಾತನಾಡಿ, ಕೋವಿಡ್‌–19 ನಂತರ ವಕೀಲರ ಸ್ಥಿತಿಗತಿಯ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಸಂಘವು ಹೆಚ್ಚಿನ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸಂಘವು ಪ್ರತಿಯೊಬ್ಬ ವಕೀಲರ ನೆರವಿಗೆ ಬರಬೇಕು. ವಕೀಲರ ವೃತ್ತಿ ಭದ್ರತೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಲ್. ವಿಜಯಲಕ್ಷ್ಮಿದೇವಿ, ನ್ಯಾಯಾಧೀಶರಾದ ರವಿಕಾಂತ್, ಲಲಿತಾ ಬಿ.ಎಲ್., ಬಿ. ಚಂದ್ರಶೇಖರ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್ .ಬಿ ಮಂಜುನಾಥ್, ಕಾರ್ಯದರ್ಶಿ ಜಿ .ರಂಗಸ್ವಾಮಿ, ಸಾಹಿತಿಲಲಿತ ಶೇಷಾದ್ರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶ್ ಗೌಡ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಂ.ಎನ್. ಮಧುಸೂದನ್, ವಕೀಲರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.