ಹಾಸನ: ‘ಪರಿಶಿಷ್ಟರಿಗೆ ಅನ್ಯಾಯವಾದಾಗ ಹೋರಾಟ ಮಾಡಿ ನ್ಯಾಯ ಕೊಡಿಸುತ್ತಿದ್ದ ದಿವಂಗತ ಬಿ.ವಿ. ಚಂದ್ರಪ್ರಸಾದ್ ತ್ಯಾಗಿ ಅಪರೂಪದ ನಾಯಕ’ ಎಂದು ಅಂಬೇಡ್ಕರ್ ಚಿಂತಕ ಹಾಗೂ ನಿವೃತ್ತ ಪ್ರಾಂಶುಪಾಲ ಎಚ್.ಎಂ. ರುದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಬಿ.ವಿ. ಚಂದ್ರಪ್ರಸಾದ್ ತ್ಯಾಗಿ ಅವರ 15ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆರ್.ಬಿ. ಮೋರೆ, ಡಾ.ಆನಂದ ತೇಲ್ತುಂಬ್ಡೆ ಅವರ ‘ಮಹಾಡ್ ಕೆರೆ ಸತ್ಯಾಗ್ರಹ’ ಮತ್ತು ‘ಮಹಾಡ್ ಮೊದಲ ದಲಿತ ಬಂಡಾಯ’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
‘ಚಂದ್ರಪ್ರಸಾದ್ ತ್ಯಾಗಿ ಪರಿಶಿಷ್ಟರ ಹಕ್ಕುಗಳಿಗಾಗಿ ಹೋರಾಡುವ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದರು. ಪ್ರೊ. ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿಯಂತವರಿದ್ದ ಸಮಾಜವಾದಿ ಚಳವಳಿ ರಾಜಕೀಯ ಕಾರಣಕ್ಕಾಗಿ ತಟಸ್ಥವಾಗಿದ್ದಾಗ ಚಳವಳಿಯನ್ನು ಪ್ರಾರಂಭಿಸಿ ಪರಿಶಿಷ್ಟರು ಇಂದು ಸಂವಿಧಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಭಾರತೀಯರಿಗೆ ಧ್ವನಿ ಇಲ್ಲದಾಗೆ ಮಾಡಿದ್ದಾರೆ’ ಎಂದರು.
ಮಹಿಳೆಯರು, ಬಡವರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಈ ನಡುವೆ ಸಾಮಾನ್ಯ ವರ್ಗದವರು ಬಿಸಿಎಂಗೆ ಬರಲು ಮುಂದಾಗಿದ್ದರೆ ಬಿಸಿಎಂ ಜನಾಂಗದವರು ಪರಿಶಿಷ್ಟ ವರ್ಗಕ್ಕೆಬರಬೇಕೆಂದು, ಪರಿಶಿಷ್ಟ ವರ್ಗದವರು ಪರಿಶಿಷ್ಟ ಜಾತಿಗೆ ಬರುವ ತವಕದಲ್ಲಿದ್ದು, ಪರಿಶಿಷ್ಟ ಜಾತಿಯವರು ಮೀಸಲಾತಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ದಲಿತ್ ಶೋಷಣ್ ಮುಕ್ತಿ ಮಂಚ್ ಅಖಿಲ ಭಾರತ ಸಮಿತಿ ಸದಸ್ಯರಾದ ಎನ್. ನಾಗರಾಜು, ಎವಿಕೆ ಕಾಲೇಜು ಸಹ ಪ್ರಾಧ್ಯಾಪಕಸಿ.ಚ. ಯತೀಶ್ವರ್, ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ದಲಿತ ಸಂಘರ್ಷ ಸಮಿತಿ ಕೃಷ್ಣದಾಸ್, ಹಿರಿಯ ರೈತ ಮುಖಂಡ ಎಸ್.ಎನ್. ಮಂಜುನಾಥ್ ದತ್ತ, ಡಿ.ಎಚ್.ಎಸ್. ಜಿಲ್ಲಾ ಸಹ ಸಂಚಾಲಕಿ ಎಚ್.ಟಿ. ಮೀನಾಕ್ಷಿ, ಮುಖಂಡರಾದ ವೀರಭದ್ರಪ್ಪ, ನಾರಾಯಣದಾಸ್, ದ.ಸಂ.ಸ ಜಿಲ್ಲಾ ಸಂಚಾಲಕ ಎಚ್.ಕೆ. ಸಂದೇಶ, ರಾಜ್ಯ ಸಂಚಾಲಕ ಕೆ. ಈರಪ್ಪ, ರಾಜಶೇಖರ್, ಸಿಐಟಿಯು ಮುಖಂಡ ಧರ್ಮೇಶ್, ಜಿ. ಚಂದ್ರಶೇಖರ್, ಪ್ರಮೀಳಾ ಕೊಟ್ಟೂರು ಶ್ರೀನಿವಾಸ್, ಅಂಬುಗ ಮಲ್ಲೇಶ್, ಮಾದಿಗ ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್. ವಿಜಯ ಕುಮಾರ್ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.