ADVERTISEMENT

ಅರಕಲಗೂಡು | ಆಧಾರ್‌ಗೆ ಮೊಬೈಲ್‌ ಸಂಖ್ಯೆ ಜೋಡಣೆ; ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 13:36 IST
Last Updated 26 ಜುಲೈ 2023, 13:36 IST
ಅರಕಲಗೂಡಿನಲ್ಲಿ ಬುಧವಾರ ಎಸ್‌ಬಿಐ ಮುಂದೆ ಆಧಾರ್‌ಗೆ ಮೊಬೈಲ್ ಸಂಖ್ಯೆ ಜೋಡಿಸಲು ಮಳೆಯಲ್ಲೇ ಕೊಡೆ ಹಿಡಿದು ನಿಂತಿದ್ದ ಜನರು
ಅರಕಲಗೂಡಿನಲ್ಲಿ ಬುಧವಾರ ಎಸ್‌ಬಿಐ ಮುಂದೆ ಆಧಾರ್‌ಗೆ ಮೊಬೈಲ್ ಸಂಖ್ಯೆ ಜೋಡಿಸಲು ಮಳೆಯಲ್ಲೇ ಕೊಡೆ ಹಿಡಿದು ನಿಂತಿದ್ದ ಜನರು   

ಅರಕಲಗೂಡು: ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್‌ಗೆ ಮೊಬೈಲ್‌ ನಂಬರ್ ಜೋಡಣೆ ಮಾಡಿಸುವುದು ಕಡ್ಡಾಯವಾಗಿರುವ ಕಾರಣ ಜನರು ಆಧಾರ್ ನೋಂದಣಿ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ.

ಬುಧವಾರ ಇಲ್ಲಿನ ಎಸ್‌ಬಿಐ ಮುಂದೆ ಜನರು ಮಳೆಯನ್ನೂ ಲೆಕ್ಕಿಸದೆ ಸಾಲುಗಟ್ಟಿ ನಿಂತಿದ್ದರು.

ಪಟ್ಟಣದಲ್ಲಿ ಎಸ್‌ಬಿಐ, ಕೆನರಾ ಬ್ಯಾಂಕ್, ಅಂಚೆ ಕಚೇರಿ ಹಾಗೂ ಬಿಎಸ್‌ಎನ್‌ಎಲ್ ಕಚೇರಿಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಅಂಚೆ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಕಾರಣ ನಿಯಮಿತವಾಗಿ ನೋಂದಣಿ ನಡೆಯುತ್ತಿಲ್ಲ. ಉಳಿದ ಕೇಂದ್ರಗಳಲ್ಲಿ ದಿನವೊಂದಕ್ಕೆ 50ರಿಂದ 60 ಜನರ ನೋಂದಣಿ ನಡೆಯುತ್ತಿದೆ. ಕೊಣನೂರು ಬಿಟ್ಟರೆ ಉಳಿದೆಡೆ ನೋಂದಣಿ ಕೇಂದ್ರಗಳಿಲ್ಲ. ತಾಲ್ಲೂಕಿನ ವಿವಿಧೆಡೆಗಳಿಂದ ಜನರು ಪಟ್ಟಣಕ್ಕೆ ಬರುತ್ತಿರುವ ಕಾರಣ ತೀವ್ರ ಜನಜಂಗುಳಿ ಏರ್ಪಡುತ್ತಿದೆ.

ADVERTISEMENT

‘ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಿಸಲು 3 ದಿನಗಳಿಂದ ಬರುತ್ತಿದ್ದೇನೆ. ಬೆಳಿಗ್ಗೆ 6 ಗಂಟೆಗೆ ಬಂದರೂ ಕೆಲಸವಾಗುತ್ತಿಲ್ಲ. ಕೂಲಿ ಮಾಡಿ ಜೀವನ ಸಾಗಿಸುವ ನಮ್ಮಂತಹವರಿಗೆ ಸಮಸ್ಯೆಯಾಗಿದೆ’ ಎಂದು ತೇಜೂರು ಕೊಪ್ಪಲು ಗ್ರಾಮದ ವ್ಯಕ್ತಿಯೊಬ್ಬರು ಅಳಲುತೋಡಿಕೊಂಡರು.

‘ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ತೆರೆದು ನೋಂದಣಿ ಕಾರ್ಯ ನಡೆಸಬೇಕು’ ಎಂದು ಮಡಿಕೆ ಹೊಸಳ್ಳಿಯ ಮಹಿಳೆಯೊಬ್ಬರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.