ಕೊಣನೂರು: ಇಲ್ಲಿನ ಬಿವಿಎಂ ಕಲ್ಯಾಣ ಮಂಟಪದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವು ನೆರವೇರಿತು.
ಜಿಲ್ಲಾ ಸರ್ಕಾರಿ ಆಸ್ಪತ್ರೆ ಮಡಿಕೇರಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಸನ, ಸಮುದಾಯ ಆರೋಗ್ಯ ಕೇಂದ್ರ ಕೊಣನೂರು, ವಾಸವಿ ಕ್ಲಬ್, ಆರ್ಯವೈಶ್ಯ ಮಂಡಳಿ, ಆರ್ಯವೈಶ್ಯ ಸಹಕಾರ ಸಂಘದಿಂದ ನಡೆದ ತಪಾಸಣಾ ಶಿಬಿರವನ್ನು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸತೀಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿ, ‘ಕೊಡಗು ಜಿಲ್ಲಾ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಜನ ಸಾಮಾನ್ಯರಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಗಳು ಲಭ್ಯವಿದ್ದು, ಕೊಡಗಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಒತ್ತಡ ಕಡಿಮೆಯಿರುವ ಹಿನ್ನೆಲೆಯಲ್ಲಿ ಹಾಸನ ಮತ್ತು ಮೈಸೂರು ಭಾಗದ ಅನೇಕ ಜನರು ಕೊಡಗಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಜನಸ್ನೇಹಿ ಕರ್ತವ್ಯ ನಿರ್ವಹಣೆಯಿಂದ ಉತ್ತಮ ಚಿಕಿತ್ಸೆ ದೊರೆಯುತ್ತಿದೆ’ ಎಂದರು.
ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ನಂಜುಡಯ್ಯ ಮಾತನಾಡಿ, ‘ಕೊಡಗಿನ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳಿದ್ದು, ಎಂಆರ್ಐ, ಸಿಟಿ ಸ್ಕ್ಯಾನಿಂಗ್ ವ್ಯವಸ್ಥೆಯಿದೆ. ಎಲ್ಲಾ ವಿಭಾಗಗಳಲ್ಲೂ ನುರಿತ ವೈದ್ಯರಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಗೆ ಖಾಸಗಿ ಸಹಭಾಗಿತ್ಸದಲ್ಲಿ ಉತ್ತಮ ಸೇವೆ ಒದಗಿಸುವ ಕೇಂದ್ರವನ್ನು ಸದ್ಯದಲ್ಲೇ ಪ್ರಾರಂಭಿಸಲಾಗುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಯೂನಿಟ್ ಪ್ರಾರಂಭಿಸಲು ಸರ್ಕಾರದಿಂದ ಆದೇಶ ಬಂದಿದ್ದು, ಉತ್ತಮ ವೈದ್ಯಕೀಯ ಸೇವೆ ಒದಗಿಸಲು ನಾವು ಬದ್ಧರಿದ್ದು, ಅಗತ್ಯ ದಾಖಲಾತಿಗಳನ್ನು ತಂದು ಉಚಿತ ಸೇವೆ ಪಡೆಯಿರಿ’ ಎಂದರು.
ಶಿಬಿರದಲ್ಲಿ ಕೊಣನೂರು ಮತ್ತು ಸುತ್ತಮುತ್ತಲಿನ ಅನೇಕರು ಭಾಗಿಯಾಗಿ ತಮ್ಮ ಆರೋಗ್ಯ ತಪಾಸಳಾ ಮಾಡಿಕೊಂಡು ಅಗತ್ಯ ಔಷಧಗಳನ್ನು ಪಡೆದರು.
ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಡಾ.ಲೋಕೇಶ್, ಡಾ.ಕರುಣಾಕರ್, ಅಕ್ಷತಾ, ಲಯನಾ, ಶ್ರೀದೇವಿ, ಶೃತಿ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು, ಸಿಬ್ಬಂದಿಗಳು, ವಾಸವಿ ಕ್ಲಬ್ ಡೆಪ್ಯುಟಿ ಗವರ್ನರ್ ಬಿ.ಸಿ.ಮಂಜುನಾಥ್, ಅಧ್ಯಕ್ಷ ರಂಗನಾಥ್, ವಾಸವಿ ಕ್ಲಬ್ ಮತ್ತು ಆರ್ಯವೈಶ್ಯ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.