ಹಿರೀಸಾವೆ: ಹೋಬಳಿಯ ಜಿನ್ನೇನಹಳ್ಳಿ ಕೊಪ್ಪಲಿನಲ್ಲಿ ತಾಯಿಯೇ 6 ವರ್ಷದ ಮಗಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಸಾನ್ವಿ (6) ಕೊಲೆಯಾದ ಬಾಲಕಿ. ಶ್ವೇತಾ ಆರೋಪಿ.
‘ಮಗಳನ್ನು ಬೆಳಿಗ್ಗೆ ತೋಟಕ್ಕೆ ಕರೆದೊಯ್ದು ನೀರಿನ ಗುಂಡಿಯಲ್ಲಿ ಮುಳುಗಿಸಿ ಕಾಲಿನಿಂದ ತುಳಿದು ಸಾಯಿಸಿದ್ದಾಳೆ. ನಂತರ ಗ್ರಾಮಕ್ಕೆ ಬಂದು, ‘ನಾನು ಮತ್ತು ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟೆಗೆ ಬೀಳಲು ಹೋಗಿದ್ದೆವು. ಮಗಳನ್ನು ತಳ್ಳಿದೆ. ನಂತರ ನಾನು ಭಯದಿಂದ ವಾಪಸಾದೆ’ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾಳೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಗ್ರಾಮಸ್ಥರು ಅಲ್ಲಿಗೆ ಹೋಗಿ ನೋಡಿದಾಗ ಸಣ್ಣ ಗುಂಡಿಯಲ್ಲಿ ಸಾನ್ವಿ ಮೃತದೇಹ ಸಿಕ್ಕಿದೆ. ಈ ಬಗ್ಗೆ ಕೇಳಿದಾಗ ವಿಚ್ಛೇದನ ಸಿಕ್ಕ ಮೇಲೆ ಮಗಳನ್ನು ಗಂಡ ಕರೆದುಕೊಂಡು ಹೋಗುತ್ತಾನೆ, ಅದಕ್ಕೆ ಅವಕಾಶ ಆಗದಿರಲೆಂದು ಎಂದು ಕೊಲೆ ಮಾಡಿರುವುದಾಗಿ ಗ್ರಾಮಸ್ಥರ ಮುಂದೆ ಹೇಳಿದ್ದಾಳೆ. ಗ್ರಾಮದ ಹಿರಿಯರು ಹಿರೀಸಾವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕೆ ಎಸ್ಪಿ ಮೊಹಮ್ಮದ್ ಸುಜಿತಾ, ಡಿವೈಎಸ್ಪಿ ಕುಮಾರ್, ಸಿಪಿಐ ಸಂತೋಷ್ ಭೇಟಿ ನೀಡಿದ್ದರು. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದ ಶ್ವೇತಾ ಅವರನ್ನು 2018ರಲ್ಲಿ ಶಿವಮೊಗ್ಗ ಮೂಲದ ರಘು ಅವರಿಗೆ ಮದುವೆ ಮಾಡಲಾಗಿತ್ತು. ಕೆಲವು ವರ್ಷಗಳ ನಂತರ ಇವರ ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿಲ್ಲ. ಈ ಬಗ್ಗೆ ಹಲವು ಬಾರಿ ರಾಜಿ– ಪಂಚಾಯಿತಿಗಳನ್ನು ಮಾಡಲಾಗಿತ್ತು. ರಘು ನೆಲಮಂಗಲದ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ದಂಪತಿ 2023ರಲ್ಲಿ ನೆಲಮಂಗಲ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
‘ವಿಚ್ಛೇದನ ಆಗುವವರೆಗೆ ನಿನ್ನೊಂದಿಗೆ ಇರುತ್ತೇನೆ ಎಂದು ಜೊತೆಗಿದ್ದಳು. ಎರಡು ದಿನದ ಹಿಂದೆ ಮನೆಯಿಂದ ಮಗಳನ್ನು ಕರೆದುಕೊಂಡು ಬಂದಿದ್ದಳು. ಹತ್ಯೆಗೆ ಆಕೆಯ ಅಕ್ಕ ಮಂಜಕ್ಕ ಕುಮ್ಮಕ್ಕು ನೀಡಿದ್ದಾಳೆ ಎಂದು ಪತಿ ರಘು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.