ಹಾಸನ: ಉತ್ತರ ಪತ್ರಿಕೆಯಲ್ಲಿನ ಸರಿಯುತ್ತರಗಳನ್ನು ಉದ್ದೇಶಪೂರ್ವಕವಾಗಿ ಹೊಡೆದು ಹಾಕಿದ ಆರೋಪದ ಮೇರೆಗೆ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಚಾರ್ಯೆ ಶೋಭಾ ದೇವಮಾನೆ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಚನ್ನಯ್ಯ ಹಿರೇಮಠ ಅವರ ತೃತೀಯ ವರ್ಷದ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡುವ
ಸಮಯದಲ್ಲಿ ಸರಿ ಉತ್ತರಗಳನ್ನು ಪ್ರಾಂಶುಪಾಲರು ಹೊಡೆದು ಹಾಕಿದ್ದಾರೆ. ಪ್ರಥಮ ಮತ್ತು ದ್ವಿತೀಯ ವರ್ಷದ
ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದ ವಿದ್ಯಾರ್ಥಿ ಈ ಬಾರಿ ಅನುತ್ತೀರ್ಣನಾಗಿದ್ದಾನೆ. ಇದಕ್ಕೆ ಪ್ರಾಂಶುಪಾಲರೇ ನೇರ ಕಾರಣ
ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಚನ್ನಯ್ಯ ಹಿರೇಮಠ ಮಾತನಾಡಿ, ‘ಎರಡು ವರ್ಷ ಉತ್ತಮ ಅಂಕ ಬಂದಿದ್ದು, ಈ ವರ್ಷ ಅನುತ್ತೀರ್ಣನಾಗಿದ್ದೇನೆ. ಕಾರಣ ತಿಳಿಯಲು ಉತ್ತರ ಪತ್ರಿಕೆಯ ಫೋಟೋ ಕಾಪಿ ತರಸಿಕೊಂಡು ನೋಡಿದಾಗನನ್ನ ಉತ್ತರವನ್ನು ಹೊಡೆದುಹಾಕಿ ಆನಂತ ಸ್ಕ್ಯಾನ್ಮಾಡಿ ಕೇಂದ್ರ ಕಚೇರಿಗೆ ಕಳುಹಿಸಿರುವುದು ತಿಳಿದುಬಂದಿದೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಾಚಾರ್ಯೆ ಹಾಗೂ ವಿದ್ಯಾರ್ಥಿ ವಿರುದ್ಧ ಎಫ್ಐಆರ್ದಾಖಲಾಗಿದೆ’ ಎಂದರು.
ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಐಶ್ವರ್ಯ ಶೆಟ್ಟಿ ಮಾತನಾಡಿ, ಪ್ರಾಂಶುಪಾಲರ ವಿರುದ್ಧ ಎಫ್ಐಆರ್
ದಾಖಲಾಗಿದ್ದರೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹಿಮ್ಸ್ ನಿರ್ದೇಶಕ ಹಾಗೂ ಕಾಲೇಜಿನ ಡೀನ್ ಡಾ.ಬಿ.ಸಿ. ರವಿಕುಮಾರ್, ’ಪ್ರಾಚಾರ್ಯೆ ಶೋಭಾ ದೇವಮಾನೆ ರಜೆಯಲ್ಲಿ ಇದ್ದಾರೆ. ಈ ವಿಷಯ ನನ್ನ ಗಮನಕ್ಕೂ ತಂದಿಲ್ಲ. ಮಾಹಿತಿ ಪಡೆದು ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ವಿದ್ಯಾರ್ಥಿ ಚನ್ನಯ್ಯ ಅವರಿಗೆ ನ್ಯಾಯ ದೊರಕಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಕಾರ್ಯಕರ್ತರಾದ ಬಿಪಿನ್, ವಿನುತ್, ಪ್ರಣವ್ ಭಾರದ್ವಾಜ್, ಪ್ರಜ್ವಲ್, ಮಂಜು, ಚಂದನ್, ಲಾವಣ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.