ADVERTISEMENT

ಕೆರೆಯಾದ ತೋಟ: ಕೋಡಿ ಬಿದ್ದರೆ ಮತ್ತೆ ಸಮಸ್ಯೆ

ದೋಣಿಗಾಲ್‌ನಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ: ಸಾರ್ವಜನಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 7:49 IST
Last Updated 12 ಆಗಸ್ಟ್ 2021, 7:49 IST
ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ನಲ್ಲಿ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ತಡೆಗೋಡೆ ಇಲ್ಲದೆ ಸಾವಿರಾರು ಲಾರಿ ಲೋಡ್‌ ಮಣ್ಣು ಸುರಿದಿರುವುದು
ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ನಲ್ಲಿ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ತಡೆಗೋಡೆ ಇಲ್ಲದೆ ಸಾವಿರಾರು ಲಾರಿ ಲೋಡ್‌ ಮಣ್ಣು ಸುರಿದಿರುವುದು   

ಸಕಲೇಶಪುರ: ಎರಡು ವಾರಗಳ ಹಿಂದೆ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ದೋಣಿಗಾಲ್‌ ಬಳಿ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಭೂ ಕುಸಿತ ಉಂಟಾಗಿರುವ ಪಕ್ಕದಲ್ಲಿಯೇ, ಚತುಷ್ಪಥ ಕಾಮಗಾರಿಗಾಗಿ ತಡೆಗೋಡೆ ಇಲ್ಲದೆ ಮಣ್ಣು ಸುರಿದಿರುವ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು ಮತ್ತೊಂದು ಅನಾಹುತವಾಗುವ ಸಾಧ್ಯತೆ ಕಂಡು ಬಂದಿದೆ.

ಭೂ ಕುಸಿತವಾದ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಡೆಗೋಡೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು ಮುಂದಿನ 15 ರಿಂದ 20 ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಮುನ್ಸೂಚನೆ ಇದೆ. ಆದರೆ, ಅದರ ಪಕ್ಕದಲ್ಲಿಯೇ ಸುಮಾರು ನೂರು ಅಡಿ ಆಳದ ಮೂಲಕವೇ ಚತುಷ್ಪಥ ಹಾದು ಹೋಗುವುದರಿಂದ, ಕಾಮಗಾರಿ ಗುತ್ತಿಗೆದಾರರು ತಡೆಗೋಡೆ ನಿರ್ಮಿಸದೆ ಸಾವಿರಾರು ಲೋಡ್‌ ಮಣ್ಣು ಸುರಿದು ಪ್ರಪಾತವನ್ನು ಮುಚ್ಚಿದ್ದಾರೆ.

ಗುಡ್ಡ ಹಾಗೂ ರಸ್ತೆಯಿಂದ ಹೊಳೆಯಂತೆ ಹರಿದು ಬರುವ ಮಳೆ ನೀರು ಕೆಳಭಾಗಕ್ಕೆ ಹೋಗುವುದಕ್ಕೆ ಪೈಪ್‌ಗಳನ್ನು ಅಳವಡಿಸದೆ ಮಣ್ಣು ಸುರಿಯಲಾಗಿದೆ. ಇದರಿಂದ ಕೆಳಭಾಗಕ್ಕೆ ನೀರು ಹರಿಯದೆ ಇಡೀ ತೋಟದಲ್ಲಿ ಭಾರಿ ನೀರು ನಿಂತು ಕೆರೆಯಂತಾಗಿದೆ. ಮಳೆ ಮುಂದುವರೆದರೆ ಚತುಷ್ಪಥಕ್ಕೆ ಹಾಕಿರುವ ಮಣ್ಣು ಕೋಡಿ ಬೀಳುವ ಸಂಭವವಿದೆ. ಕೋಡಿ ಬಿದ್ದರೆ, ಜಮೀನು, ಹೆದ್ದಾರಿಗೂ ಹಾನಿಯಾಗಲಿದೆ.

ADVERTISEMENT

ಮುನ್ನೆಚ್ಚರಿಕೆ ಬೇಕು: ನೀರು ಒಮ್ಮೆಲೆ ನುಗ್ಗಿದರೆ ರಭಸಕ್ಕೆ ಪಕ್ಕದ ಹೆದ್ದಾರಿಯಲ್ಲಿ ಪುನಃ ಭೂ ಕುಸಿತದ ಆತಂಕ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಕೃತಕ ಕೋಡಿ ಮಾಡಿ ಖಾಲಿ ಮಾಡಬೇಕು. ಇಲ್ಲವಾದರೆ ಹೆದ್ದಾರಿಗೆ ಮತ್ತೆ ಕಂಟಕ ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.

ಬೆಂಗಳೂರು– ಮಂಗಳೂರು ನಡುವಿನ ಸಂಪರ್ಕಕ್ಕೆ ಭಾರಿ ವಾಹನಗಳಿಗೆ ಶಿರಾಡಿ, ಚಾರ್ಮಾಡಿ, ಸಂಪಾಜೆ ಎಲ್ಲಾ ಮಾರ್ಗಗಳೂ ಸಹ ಬಂದ್ ಆಗಿ 20 ದಿನಗಳು ಕಳೆದಿವೆ. ಪ್ರಯಾಣಿಕರು, ಲಾರಿ ಮಾಲೀಕರು ದೋಣಿಗಾಲ್‌ ಭೂಕುಸಿತ ದುರಸ್ತಿ ಕಾಮಗಾರಿ ಮುಗಿಯುವುದನ್ನೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಪುನಃ ಭೂ–ಕುಸಿತವಾದರೆ ಸಮಸ್ಯೆ ಮತ್ತೆ ಉಲ್ಬಣಿಸಲಿದೆ.

‘ಮಣ್ಣು ಹಾಕಿರುವ ಮೇಲ್ಭಾಗದ ತೋಟ ಕೆರೆಯಂತಾಗಿದೆ. ನೀರಿನ ಒತ್ತಡ ಹೆಚ್ಚಾದಂತೆ ಸಡಿಲವಾದ ಮಣ್ಣು ಕೋಡಿ ಬೀಳುವುದರಲ್ಲಿ ಅನುಮಾನ ಇಲ್ಲ’ ಎಂದು ಸಿವಿಲ್‌ ಎಂಜಿನಿಯರ್‌ ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.